ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ದ ಮೊಕದ್ದಮೆ
ಬೆಂಗಳೂರು : ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ರಾಜ್ಯ ಸರ್ಕಾರ ಸಮರಕ್ಕೆ ನಿಂತಿದೆ.
ದಿನಕ್ಕೊಂದು ವಿವಾದದಲ್ಲಿ ಸಿಲುಕುತ್ತಿರುವ ದೋಸ್ತಿ ಸರ್ಕಾರ, ಅರಣ್ಯ ಭೂಮಿ ಒತ್ತುವರಿ ಮತ್ತು ಅರಣ್ಯ ನಾಶದ ಗಂಭೀರ ಆರೋಪ ಮಾಡಿ, ಶ್ರೀಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದೆ.
ವಾಸ್ತವವಾಗಿ ಪ್ರಕರಣ ದಾಖಲಾಗಿರುವುದು; 2006ರ ಅ.10ರಂದು. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್ ಮತ್ತಿತರರು, ಈ ಪ್ರಕರಣ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.
ಪ್ರತಿಪಕ್ಷದ ನಾಯಕರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದರು. ಐದು ಲಕ್ಷ ಮರ ಬೆಳೆಸಲು ಮುಂದಾದ ಶ್ರೀಗಳು, ಕಾಡು ಕಡಿಯುತ್ತಾರೆ ಎಂದರೆ ಯಾರು ನಂಬುತ್ತಾರೆ. ಇದೆಲ್ಲವೂ ಯಾರದೋ ಹುನ್ನಾರ ಎಂದು ಜೆಡಿಯು ಶಾಸಕ ಜೆ.ಡಿ.ಮಾಧುಸ್ವಾಮಿ ಹೇಳಿದರು.
ಪ್ರಕರಣದ ಮಾಹಿತಿ ತರಿಸಿಕೊಂಡು, ಪರಿಶೀಲಿಸುವುದಾಗಿ ಗೃಹಸಚಿವ ಎಂ.ಪಿ.ಪ್ರಕಾಶ್ ಭರವಸೆ ನೀಡಿದರು. ಆಗ ವಿಧಾನಸಭೆ ಶಾಂತವಾಯಿತು.
ಏನಿದು ಶ್ರೀಗಳ ವಿರುದ್ಧ ಪ್ರಕರಣ? : ಕೆಂಗೇರಿ ಬಳಿಯ ತುರಹಳ್ಳಿಗುಡ್ಡದ ಅರಣ್ಯ ಪ್ರದೇಶದಲ್ಲಿ ಐದಾರು ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅರಣ್ಯದ ಗಡಿಯಲ್ಲಿದ್ದ ಮರಗಳ ಕಡಿಯಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಪ್ರಕರಣ ದಾಖಲುಗೊಂಡಿದೆ.
ದೊಡ್ಡದು ಮಾಡಬೇಡಿ : ಒತ್ತುವರಿಯಾಗಿದೆ ಎಂಬುದು ಸಾಬೀತಾದರೆ ತಕ್ಷಣ ಬಿಟ್ಟುಕೊಡುತ್ತೇವೆ. ಅನಗತ್ಯವಾಗಿ ಈ ವಿಚಾರವನ್ನು ಜಗ್ಗುವುದು ಬೇಡ ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)