ರಾಮನವಮಿ ಪಾನಕದೊಂದಿಗೆ ಸಂಗೀತ ಸಮಾರಾಧನೆ
ಬೆಂಗಳೂರು : ರಾಮನವಮಿಯ ಸಂಭ್ರಮ-ಸಡಗರ ರಾಜ್ಯದಲ್ಲಿ ಮಂಗಳವಾರ ಕಂಡು ಬರುತ್ತಿದೆ. ರಾಮಭಜನೆ, ರಾಮಕೀರ್ತನೆಗಳು ವಿವಿಧ ರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ತುಂಬಿವೆ.
ನಗರದ ದೇವಾಲಯಗಳಲ್ಲಿ ಪಾನಕ-ಕೋಸಂಬರಿ, ಮಜ್ಜಿಗೆ ಸಮಾರಾಧನೆ ನಡೆದಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟ ಜನ, ಹೊಟ್ಟೆ ತಂಪು ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ವಿವಿಧ ರಾಮಮಂದಿರಗಳಿಗೆ ಭಕ್ತರು ಭೇಟಿ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ಆಟೋ ರಿಕ್ಷಾ ಚಾಲಕರ ಸಂಘ, ನಗರದ ವಿವಿಧೆಡೆ ಪೆಂಡಾಲ್ ಹಾಕಿ ಜನರಿಗೆ ಪಾನಕ ವಿತರಿಸುತ್ತಿದೆ.
ಸಂಗೀತ ಸಂಭ್ರಮ : ಬೆಂಗಳೂರಿನ ಕೋಟೆ ಹೈಸ್ಕೂಲ್ ಆವರಣದಲ್ಲಿ ಇಂದಿನಿಂದ(ಮಾ.26) ಶ್ರೀರಾಮನವಮಿ ಸಂಗೀತ ಮತ್ತು ನೃತ್ಯೋತ್ಸವ ಆರಂಭಗೊಂಡಿವೆ. ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ, ಈ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬರುತ್ತಿದೆ. ಮುಂದಿನ 37ದಿನಗಳ ಕಾಲ ಈ ವೇದಿಕೆಯಲ್ಲಿ ಸಂಗೀತದ ದರ್ಬಾರು.
ಕದ್ರಿ ಗೋಪಾಲನಾಥ್ರ ಸ್ಯಾಕ್ಸೊಪೋನ್ನಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ವೇದಿಕೆ ಮೇಲೆ ಕೆ.ಜೆ.ಯೇಸುದಾಸ್, ವಿದ್ಯಾಭೂಷಣ, ಕುನ್ನಕ್ಕುಡಿ ಆರ್.ವೈದ್ಯನಾಥನ್ ಮತ್ತಿತರ ದಿಗ್ಗಜರು ಸಂಗೀತ ಮಾಧುರ್ಯ ಆಲಿಸುವ ಅವಕಾಶ, ಸಂಗೀತ ಪ್ರೇಮಿಗಳದು.
ರಾಷ್ಟ್ರಪತಿ ಸಂದೇಶ : ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ರಾಮನವಮಿ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಕೋರಿದ್ದಾರೆ. ರಾಮನ ಆದರ್ಶ ಮತ್ತು ಜೀವನ ಮೌಲ್ಯ ದೊಡ್ಡದು ಎಂದು ಅವರು ಸಂದೇಶ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)