ಬೆಳಗಾವಿ ಡಿಸಿ ಶಾಲಿನಿ ವರ್ಗಾವಣೆಗೆ ಕರವೇ ವಿರೋಧ
ಬೆಳಗಾವಿ : ಬೆಳಗಾವಿ ಜಿಲ್ಲಾಧಿಕಾರಿ ಡಾ. ಶಾಲಿನಿ ರಜನೀಶ್ ವರ್ಗಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವರ್ಗಾವಣೆ ಆದೇಶವನ್ನು ಕೂಡಲೇ ರದ್ದು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪ್ರಾದೇಶಿಕ ಆಯುಕ್ತ ಅಮಿತ್ಪ್ರಸಾದ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿ, ವೇದಿಕೆ ಕಾರ್ಯಕರ್ತರು ಸುದ್ದಿಗಾರರ ಜೊತೆ ಮಾತನಾಡಿದರು.
ಶಾಲಿನಿ ರಜನೀಶ್ ಅವರನ್ನು ವಿಶ್ವ ಕನ್ನಡ ಸಮ್ಮೇಳನ ನಡೆಯುವ ತನಕವಾದರೂ ಮುಂದುವರೆಸಬೇಕು. ಶಾಲಿನಿ ಅವರು ಬೆಳಗಾವಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದೊಂದಿಗೆ ನೀಡಿದ್ದೇವೆ. ಕನಿಷ್ಠ ಪಕ್ಷ 3 ವರ್ಷವಾದರೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲೇ ಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ನೆರೆ ಸಂತಸ್ತರಿಗೆ ಪರಿಹಾರ, ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಆಯೋಜನೆ, ಸರ್ಕಾರಿ ಕಚೇರಿಗಳ ಉತ್ತಮ ಕಾರ್ಯ ನಿರ್ವಾಹಣೆ - ಹೀಗೆ ಅನೇಕ ಕಾರ್ಯಗಳನ್ನು ತಮ್ಮ ಕಾಲಾವಧಿಯಲ್ಲಿ ಶಾಲಿನಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಸೇವೆ ಜಿಲ್ಲೆಗೆ ಇನ್ನಷ್ಟು ಕಾಲ ಬೇಕು ಎಂದು ವೇದಿಕೆ ಕಾರ್ಯಕರ್ತರು ಅಭಿಪ್ರಾಯಪಟ್ಟರು.
(ದಟ್ಸ ಕನ್ನಡ ವಾರ್ತೆ)