ಲಂಚ ಬೇಡಿಕೆ : ಗ್ರಾಮ ಲೆಕ್ಕಿಗ ಸೇರಿದಂತೆ ಇಬ್ಬರಿಗೆ ಶಿಕ್ಷೆ
ಮೈಸೂರು : ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕಿಗೆ ನಗರದ ವಿಶೇಷ ನ್ಯಾಯಾಲಯ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿದೆ.
ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಆರ್.ಮಾಲಿನಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಚಿಕ್ಕರಂಗಯ್ಯ ಶಿಕ್ಷೆಗೊಳಗಾದವರು.
ಆರ್.ಮಾಲಿನಿ ಅವರಿಗೆ ಒಂದು ವರ್ಷ ಕಠಿಣ ಸೆರೆಮನೆವಾಸ ಹಾಗೂ 5,000ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ ಅವರು ಎರಡು ತಿಂಗಳು ಕಾಲ ಸಾಧಾರಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಚಿಕ್ಕರಂಗಯ್ಯ ಅವರಿಗೆ ಆರು ತಿಂಗಳು ಕಠಿಣ ಸೆರೆಮನೆವಾಸ ಹಾಗೂ 2000ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ ಅವರು ಒಂದು ತಿಂಗಳು ಸಾಧಾರಣ ಸೆರೆಮನೆವಾಸ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
1997ರ ಫೆಬ್ರವರಿ 17ರಂದು ಸಬೀಹಾ ಬೇಗಂ ಎಂಬ ಮಹಿಳೆಯಿಂದ, 200ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈ ಇಬ್ಬರೂ ಅಧಿಕಾರಿಗಳು ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ತನ್ವೀರ್ ಇಸ್ಲಾಂ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ಫಾರ್ಮ್ ನಂಬರ್-3, ಅಲ್ಪಸಂಖ್ಯಾತ ದಾಖಲಾತಿ ಪ್ರಮಾಣಪತ್ರ ನೀಡಲು ಇವರು ಲಂಚ ಸ್ವೀಕರಿಸುತ್ತಿದ್ದರು. ಸಬೀಹಾ ಬೇಗಂ ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂಬುದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)