ದ್ರಾವಿಡ್ ಬಳಗದ ಆಟ ನಾಚಿಕೆಗೇಡು... ನಾಚಿಕೆಗೇಡು...
ಟ್ರೆನಿಡಾಡ್ : ಇದು ಬರೀ ಸೋಲಲ್ಲ... ಹೀನಾಯ ಸೋಲು... ಶ್ರೀಲಂಕಾ ವಿರುದ್ಧ , ನಮ್ಮ ಭಾರತದ ದ್ರಾವಿಡ್ ಬಳಗ ಸೋತು ಸುಣ್ಣವಾಗಿದೆ. ತಂಡದ ಕಳಪೆ ಆಟ, ಭಾರತೀಯರ ವಿಶ್ವಕಪ್ ಆಸೆಗೆ ತಣ್ಣೀರು ಎರಚಿದೆ.
69ರನ್ಗಳ ಅಂತರದಿಂದ ಸೋತ ಭಾರತ ತಂಡ, ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ರಾತ್ರಿಯಿಡೀ ನಿದ್ದೆಕೆಟ್ಟು ಕ್ರಿಕೆಟ್ ನೋಡಿದ ಅಭಿಮಾನಿಗಳು, ಸಚಿನ್, ಗಂಗೂಲಿ, ದೋನಿ, ದ್ರಾವಿಡ್ ಮತ್ತಿತರರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವೆಸ್ಟ್ ಇಂಡೀಸ್ನ ಪೋರ್ಟ್ ಆಫ್ಸ್ಪೇನ್ನಲ್ಲಿ ಶುಕ್ರವಾರ ನಡೆದ 9ನೇ ವಿಶ್ವಕಪ್ನ ಬಿ-ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದರೂ, ಭಾರತ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಗೊಂಡದ್ದು ಎಲ್ಲರ ಅಸಮಾಧಾನಕ್ಕೆ ಕಾರಣ. 50 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 254 ರನ್ ಪೇರಿಸಿದ ಶ್ರೀಲಂಕಾ, ಭಾರತ ತಂಡಕ್ಕೆ ಸವಾಲುವೊಡ್ಡಿತು.
ತರಂಗ ಬ್ಯಾಟಿಂಗ್ ಮತ್ತು ವಾಸ್, ಮುರಳೀಧರನ್ ಬೌಲಿಂಗ್ ಶ್ರೀಲಂಕಾ ಗೆಲುವಿಗೆ ನೆರವಾಯಿತು. 43.3ಓವರ್ಗಳಲ್ಲಿ 185ರನ್ ಮಾಡುವ ಹೊತ್ತಿಗೆ ಭಾರತ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ಕುಸಿದು ಬಿತ್ತು. ಜೊತೆಗೆ ಭಾರತದ ಕ್ರಿಕೆಟ್ ಪ್ರತಿಷ್ಠೆ ಕಳಚಿ ಬಿತ್ತು.
ಸಚಿನ್, ಧೋನಿ ಶೂನ್ಯ ಸಾಧನೆ(?) ಮೂಲಕ ತಂಡದ ಸೋಲಿಗೆ ನೆರವಾದರು. ದ್ರಾವಿಡ್ ಸ್ವಲ್ಪ ತಿಣುಕಿದರಾದರೂ, 82ಬಾಲ್ಗಳಲ್ಲಿ 60ರನ್ ಮಾಡುವಷ್ಟರಲ್ಲಿ ಕ್ಯಾಚ್ ನೀಡಿ, ಪೆವಿಲಿಯನ್ಗೆ ಮರಳಿದರು. ಪಂದ್ಯಾವಳಿಯ ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ
ಅದೃಷ್ಟದಾಟ :
ಭಾರತ, ಸೂಪರ್-8 ಪ್ರವೇಶಿಸಲು ಇನ್ನೂ ಕ್ಷೀಣ ಸಾಧ್ಯತೆಗಳಿವೆ. ಬರ್ಮುಡಾ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಬರ್ಮುಡಾ ಗೆದ್ದರೆ, ರನ್ ಸರಾಸರಿ ಮೇಲೆ ಸೂಪರ್-8 ಪ್ರವೇಶಿಸಲು ಭಾರತಕ್ಕೆ ಅವಕಾಶ ಸಿಗುತ್ತದೆ. ಕ್ರಿಕೆಟ್ನಲ್ಲಿ ಏನ್ ಬೇಕಾದರೂ ಆಗಬಹುದು.. ನೋಡೋಣ..
ಶನಿವಾರದ ಪಂದ್ಯ :
ಆಸ್ಟ್ಟ್ರೇಲಿಯಾ
-ದಕ್ಷಿಣ
ಆಫ್ರಿಕಾ(ಎ-ಗುಂಪು)
ಇಂಗ್ಲೆಂಡ್-ಕೀನ್ಯಾ(ಸಿ-ಗುಂಪು)
(ದಟ್ಸ್ ಕನ್ನಡ ನ್ಯೂಸ್ ಡೆಸ್ಕ್)