ಮಡಿಕೇರಿ : ಧನಮೋಹಿ ಮಗನ ಗುಂಡಿಗೆ ತಾಯಿ ಬಲಿ
ಮಡಿಕೇರಿ : ಪುತ್ರನೋರ್ವ ಹಣದ ದುರಾಸೆಗೆ ತಾಯಿಯನ್ನೇ ಗುಂಡಿಕ್ಕಿಕೊಂದ ಘಟನೆ, ತಾಲ್ಲೂಕಿನ ಚೆನ್ನಂಗೊಳ್ಳಿ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.
ಮೆಕೆರಿರಾ ಸರೋಜಾ(57) ಮೃತ ದುರ್ದೈವಿ. ಪವಿ ಚೆಂಗಪ್ಪ ಹತ್ಯೆಗೈದ ಪುತ್ರ. ಮಾರ್ಚ್ 15ರಂದು ತಾಯಿ ಮತ್ತು ಮಗ ಮೀನು ಕೊಳ್ಳಲು ಪಟ್ಟಣದ ಮಾರುಕಟ್ಟೆಗೆ ಬಂದಿದ್ದನ್ನು ನೆರೆಹೊರೆಯವರು ನೋಡಿದ್ದಾರೆ. ಪವಿ ಅದೇ ದಿನ ಸಂಜೆ ಹಣ ಕೊಡುವಂತೆ ಒತ್ತಾಯಿಸಿ ತಾಯಿಯಾಡನೆ ಜಗಳವಾಡಿದ್ದಾನೆ. ತಾಯಿ ಮೀನು ತೊಳೆಯುತ್ತಿದ್ದಾಗ, ಹಿಂದಿನಿಂದ ಬಂದ ಆತ ಬಂದೂಕಿನಿಂದ ಗುಂಡುಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮನೆಯಲ್ಲಿ ಮೃತದೇಹವನ್ನು ಬಿಟ್ಟು ಬೆಂಗಳೂರಿಗೆ ಓಡಿಹೋದ ಪವಿ, ಮೂರು ದಿನಗಳ ನಂತರ ಮತ್ತೆ ಗೆಳೆಯರೊಂದಿಗೆ ಊರಿಗೆ ಬಂದು ಎಂಟು ಮೂಟೆ ಕಾಫಿ ತೆಗೆದುಕೊಂಡು ಹೋದ. ಈ ಸಂದರ್ಭದಲ್ಲಿ ಗೆಳೆಯರು ಕೊಳೆತ ವಾಸನೆ ಬರುತ್ತಿದೆಯಲ್ಲಾ ಎಂದು ಪ್ರಶ್ನಿಸಿದಾಗ, ಮೀನಿನ ವಾಸನೆ ಎಂದು ಸಮಜಾಯಿಸಿದ್ದಾನೆ. ಅಲ್ಲದೆ ಅಮ್ಮ ಬೆಂಗಳೂರಿಗೆ ಹೋಗಿದ್ದಾಳೆ ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಿದ್ದಾನೆ.
ಪವಿಯ ನಡವಳಿಕೆಯಿಂದ ಸಂದೇಹಕ್ಕೊಳಗಾದ ನೆರೆಹೊರೆಯವರು ಅವರ ಸಂಬಂಧಿಯಾಬ್ಬರಿಗೆ ಈ ವಿಷಯ ತಿಳಿಸಿದ್ದಾರೆ. ಮೃತರ ಸಂಬಂಧಿ ಮನೆ ಸಮೀಪ ಬಂದಾಗ ಕೊಳೆತ ವಾಸನೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಲ್ಲಿ ಪ್ರಕರಣ ದಾಖಲಿಸಿ, ಮನೆ ಪ್ರವೇಶಿಸಿದಾಗ ಕೊಳೆತ ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.
(ಯುಎನ್ಐ)