ಮಾತುಕತೆಗೆ ಕರೆದ ಕುಮಾರಸ್ವಾಮಿಗೆ ತಕ್ಕ ಮಂಗಳಾರತಿ!
ಬೆಂಗಳೂರು : ಕಾವೇರಿ ವಿವಾದಕ್ಕೆ ಸಂಬಂಧಿಸಿದ ಮಾತುಕತೆ ಪ್ರಸ್ತಾಪವನ್ನು ತಮಿಳುನಾಡು ತಿರಸ್ಕರಿಸಿದೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯತ್ನ ಆರಂಭದಲ್ಲಿಯೇ ವಿಫಲವಾಗಿದೆ.
ಈ ಮಧ್ಯೆ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಜೊತೆ ನಡೆಸಿದ ಮಾತುಕತೆ ಕುರಿತು, ಯಾವುದೇ ಹೇಳಿಕೆ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ನಿರಾಕರಿಸಿದ್ದಾರೆ.
‘ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಕಾವೇರಿ ವಿವಾದದ ಕುರಿತು ಮಾತುಕತೆ ನಡೆಸಿಲ್ಲ ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಹೇಳಿರುವ ವರದಿ ಈಗಾಗಲೇ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಈ ಕುರಿತು ಸುದ್ದಿಗಾರರು ಕುಮಾರಸ್ವಾಮಿಯವರ ಗಮನ ಸೆಳೆದಾಗ, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಮೂರ್ನಾಲ್ಕು ದಿನ ಕಾಯ್ದು ನೋಡಿ, ಸೂಕ್ತ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಕರುಣಾನಿಧಿ ಅವರ ಹೇಳಿಕೆ ವಾತಾವರಣವನ್ನು ಮತ್ತಷ್ಟು ಬಿಗಡಾಯಿಸಬಹುದಷ್ಟೆ. ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಆಗೋದಿಲ್ಲ... ಆಗೋದಿಲ್ಲ...
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ, ಈ ಹಂತದಲ್ಲಿ ಕರ್ನಾಟಕದೊಂದಿಗೆ ಮಾತುಕತೆ ಸಾಧ್ಯವಿಲ್ಲ. ಕರ್ನಾಟಕದ ಮುಖ್ಯಮಂತ್ರಿ ನೀಡಿದ ಆಹ್ವಾನವನ್ನು ನಾವು ಸ್ವೀಕರಿಸುವುದಿಲ್ಲ ಎಂದು ಕಡ್ಡಿಮುರಿದಂತೆ ತಮಿಳುನಾಡು ಸರ್ಕಾರ ಪ್ರತಿಕ್ರಿಯಿಸಿದೆ.
(ಏಜನ್ಸೀಸ್)