ಖ್ಯಾತ ಸಣ್ಣಕಥೆಗಾರ ರಾಘವೇಂದ್ರ ಖಾಸನೀಸ ವಿಧಿವಶ
ಬೆಂಗಳೂರು : ದೀರ್ಘಕಾಲದ ಅಸ್ವಸ್ಥತೆಯಿಂದಾಗಿ, ಕನ್ನಡದ ಖ್ಯಾತ ಕಥೆಗಾರರಲ್ಲೊಬ್ಬರಾದ ರಾಘವೇಂದ್ರ ಎನ್ ಖಾಸನೀಸ(74) ಸೋಮವಾರ ವಿಧಿವಶರಾದರು.
ನಗರದ ಖಾಸಗಿ ಆಸ್ಪತ್ರೆಯಾಂದರಲ್ಲಿ ಕೊನೆಯುಸಿರೆಳೆದ ಅವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ವೈದ್ಯಕೀಯ ವೆಚ್ಚ ಭರಿಸುವ, ಆರೋಗ್ಯದ ಬಗ್ಗೆ ಕಾಳಜಿವಹಿಸುವ ಕುರಿತು ಸರ್ಕಾರ ಮಾತು ನೀಡಿತ್ತಾದರೂ ಕಿಲುಬುಕಾಸು ನೀಡದೆ ನಿರ್ಲಕ್ಷ್ಯ ತೋರಿತು. ಇನ್ನೊಂದು ಕಡೆ ಖಾಸಗಿ ಸಂಸ್ಥೆಗಳು ಹಣ ನೀಡಲು ಮುಂದೆ ಬಂದಾಗ, ಸ್ವಾಭಿಮಾನದ ಖಾಸನೀಸರು ಸತತವಾಗಿ ತಿರಸ್ಕರಿಸುತ್ತಲೇ ಹೋದರು.
ಮೃದು ಮಾತುಗಾರರಾಗಿದ್ದ ಅವರು 45ವರ್ಷಗಳ ಕಾಲ ಕಥನಕೃಷಿಯಲ್ಲಿ ತೊಡಗಿಕೊಂಡಿದ್ದರು. ಸಂಖ್ಯಾ ದೃಷ್ಟಿಯಿಂದ ಅವರು ಬರೆದ ಕಥೆಗಳು ಕಡಿಮೆ. ಆದರೆ ಬರೆದ ಬಹುತೇಕ ಕಥೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿವೆ. ಖಾಸನೀಸ, ತಮ್ಮ ಅದ್ಭುತ ಕಥೆಗಾರಿಕೆಯಿಂದ ಕನ್ನಡ ಓದುಗರ ಹಾಗೂ ಖ್ಯಾತ ಲೇಖಕರ ಗಮನಸೆಳೆದವರು.
‘ತಬ್ಬಲಿಗಳು’, ‘ಮೊನಾಲಿಸಾ’, ‘ಅಲ್ಲಾವುದ್ದೀನನ ಅದ್ಭುತ ದೀಪ’ ಮತ್ತು ‘ಹೀಗೂ ಇರಬಹುದು’ ಮೊದಲಾದವುಗಳು ಅವರ ಪ್ರಮುಖ ಕಥೆಗಳು. ಅವರ ಅನೇಕ ಕಥೆಗಳು ಹಲವು ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್ಗೆ ಅನುವಾದಗೊಂಡಿವೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಕಥೆಗಾರ
ಖಾಸನೀಸರಿಗೊಂದು
(ಕಡೆಯ)
ಪತ್ರ