ಎಸ್ಸೆಸೆಲ್ಸಿ ಪರೀಕ್ಷೆ ಪಾವಿತ್ರ್ಯತೆಗೆ ರಾಜ್ಯ ಸರ್ಕಾರ ಮನವಿ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಪಾವಿತ್ರತ್ಯೆಯ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿ/ನಿಯರಿಗೆ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಮನವಿ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಬಸವರಾಜ .ಎಸ್. ಹೊರಟ್ಟಿ ಈ ಬಗ್ಗೆ ಪತ್ರಿಕಾ ಪ್ರಕಟನೆಯನ್ನು ನೀಡಿದ್ದಾರೆ. ಅದರ ವಿವರ ಇಂತಿದೆ:
ಎಸ್.ಎಸ್ ಎಲ್.ಸಿ ಪರಿಕ್ಷೆಯು ಪ್ರತಿಯಾಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಈ ಪರೀಕ್ಷೆಯು ಹಲವು ದಶಕಗಳಿಂದ ತನ್ನ ವಸ್ತುನಿಷ್ಠತೆ ಹಾಗೂ ಸಾರ್ವತ್ರಿಕತೆಯನ್ನು ಕಾಪಾಡಿಕೊಂಡು ಬಂದಿದೆ. ಪರೀಕ್ಷೆಯ ಪಾವಿತ್ರತ್ಯೆಯನ್ನು ಕಾಪಾಡುವುದರ ಮೂಲಕ ಶ್ರಮವಹಿಸಿ ಅಭ್ಯಾಸ ಮಾಡಿದ ಮಕ್ಕಳನ್ನು ಉತ್ತೇಜಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ.
ಪರೀಕ್ಷೆಯ ಅವ್ಯವಹಾರಗಳಿಂದ ಸಮಾಜದ ವ್ಯವಸ್ಥೆಯ ಮೇಲೆ ದುಷ್ಫರಿಣಾಮ ಬೀರುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಒಂದು ವೇಳೆ ಪರೀಕ್ಷಾ ಅವ್ಯವಹಾರಗಳಿಗೆ ಕುಮ್ಮಕ್ಕು ನೀಡಿದಲ್ಲಿ ಕಾನೂನುರೀತ್ಯ ಕ್ರಮ ವಹಿಸಲಾಗುತ್ತದೆ. ಅಲ್ಲದೆ ನಕಲು ವ್ಯವಹಾರದಲ್ಲಿ ತೊಡಗಿರುವ ಅಭ್ಯರ್ಥಿಗಳನ್ನು 3 ವರ್ಷಗಳವರೆಗೆ ಡಿಬಾರ್ ಮಾಡಲು ಮತ್ತು ವಂಚನೆ ಮಾಡುವ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿರುತ್ತದೆ.
ಪರೀಕ್ಷಾ ಮಂಡಳಿಯು ಬಹು ಆಯ್ಕೆಯ ಪ್ರಶ್ನೆಗಳನ್ನು ಜಾರಿಗೆ ತಂದು 12 ವರ್ಷನ್ಗಳಲ್ಲಿ ಮುದ್ರಿಸಿ ಯಾವುದೇ ವಿದ್ಯಾರ್ಥಿ ನಕಲು ಮಾಡುವ ಸಾಧ್ಯತೆಯನ್ನು ತಡೆಗಟ್ಟಿದೆ. ಇದರಿಂದ ಕಾಪಿ ಮಾಡಿಸುವ ಅಕೃತ್ಯದಲ್ಲಿ ಮಕ್ಕಳು ಭಾಗಿಯಾಗಲು ಸಾಧ್ಯವಿಲ್ಲ. ಮಾರ್ಚ್ 2007ರ ಪರೀಕ್ಷೆಯನ್ನು ಎಲ್ಲರೂ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿ, ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿ, ಉತ್ತಮ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡುವಂತಾಗಲಿ.
(ದಟ್ಸ್ ಕನ್ನಡ ವಾರ್ತೆ)