ಯುಗಾದಿ ಪಾಡ್ಯದಿಂದ ವಿಶೇಷ ಪವರ್ಕಟ್ ಆರಂಭ
ಬೆಂಗಳೂರು: ಐದು ಮೆಗಾವ್ಯಾಟ್ ಸಾಮರ್ಥ್ಯದ ಸೂಪಾ ಮತ್ತು ಕರ್ನಾಟಕಕ್ಕೆ ನೂರು ಮೆಗಾವ್ಯಾಟ್ ಪೂರೈಸುವ ತಾಲ್ಷೇರ್ ವಿದ್ಯುತ್ ಕೇಂದ್ರ ಸ್ಥಗಿತವಾದ ಕಾರಣ ರಾಜ್ಯದಲ್ಲಿ ಕತ್ತಲೆ ಮತ್ತು ಸೆಖೆ ಇನ್ನಷ್ಟು ಹೆಚ್ಚಾಗಲಿದೆ.
ವಿದ್ಯುತ್ ಪೂರೈಕೆಯ ಈ ಘಟಕಗಳಲ್ಲಿ ರಿಪೇರಿ ಕೆಲಸ ಪೂರ್ತಿಯಾಗುವುದಕ್ಕೆ ವಾರಗಳೇ ಬೇಕಾಗುವುದರಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎನ್ನುತ್ತದೆ ಕೆಪಿಟಿಸಿಎಲ್.
30 ನಿಮಿಷಗಳ ಲೋಡ್ ಶೆಡ್ಡಿಂಗ್ (ಮಾ.19)ಇಂದಿನಿಂದಲೇ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶಗಳಿಗೆ ಇದು ಕೆಪಿಸಿಟಿಎಲ್ ಕೊಟ್ಟ ಯುಗಾದಿ ಉಡುಗೊರೆ ಎನ್ನೋಣವೆ? ಹಾಗೇನಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಆರು ಗಂಟೆಗಳ ವಿದ್ಯುತ್ ಕಡಿತ ಜಾರಿಯಲ್ಲಿರುವುದರಿಂದ ಇನ್ನರ್ಧ ಗಂಟೆ ಹೆಚ್ಚು ಹೊತ್ತು ವಿದ್ಯುತ್ ಹೋದರೆ ಅದೇನು ಹೊಸಸುದ್ದಿಯಲ್ಲ.
ವಿದ್ಯುತ್ಗಾಗಿ ಇರುವ ಬೇಡಿಕೆಗೂ ಮತ್ತು ಪೂರೈಕೆಗೂ ತಾಳಮೇಳ ಇಲ್ಲದಿರುವುದರಿಂದ ಇಂಥ ಪರಿಸ್ಥಿತಿ ಉಂಟಾಗಿದೆ. ನಮ್ಮ ರಾಜ್ಯಕ್ಕೆ ದಿನವೊಂದಕ್ಕೆ ವಿದ್ಯುತ್ ಬೇಡಿಕೆ 130 ರಿಂದ 135 ದಶಲಕ್ಷ ಯೂನಿಟ್ ಇದೆ. ಆದರೆ ಸಪ್ಲೈ ? ಬರೀ 115 ದಶಲಕ್ಷ ಯೂನಿಟ್.
ಈ ಸುದ್ದಿ ಓದಿ ಬೆಂಗಳೂರಿನ ಪ್ರಜೆಗಳು ಗಾಬರಿಯಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ 30 ನಿಮಿಷಗಳ ಕಡಿತ ರಾಜಧಾನಿಗೆ ಅನ್ವಯವಾಗುವುದಿಲ್ಲ. ಆದರೆ ಆಗಾಗ ಕರೆಂಟ್ ಹೋಗುವುದು ಸಾಮಾನ್ಯ ಎಂದು ಪ್ರತ್ಯೇಕ ವಾಗಿ ಹೇಳ ಬೇಕಾಗಿಲ್ಲ.
(ಏಜನ್ಸೀಸ್)