ಬಂಗಾಳದ ನಂದಿಗ್ರಾಮದಲ್ಲಿ ಗೋಲಿಬಾರ್ : 18 ಜನರ ಬಲಿ
ನಂದಿಗ್ರಾಮ(ಪಶ್ಚಿಮ ಬಂಗಾಳ): ವಿಶೇಷ ಆರ್ಥಿಕ ವಲಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ 18ಜನ ರೈತರು ಮೃತಪಟ್ಟು 75ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ರಾಜ್ಯ ಸರ್ಕಾರ ಇಂಡೋನೇಷ್ಯಾದ ಸಲೀಂ ಗ್ರೂಪ್ನ ವಿಶೇಷ ಆರ್ಥಿಕ ವಲಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಂಡಿದೆ. ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡೆವು ಎಂದು ರೈತರು ಪ್ರತಿಭಟನೆಗಿಳಿದಿದ್ದಾರೆ. ಒಂದು ಹಂತದಲ್ಲಿ ಗ್ರಾಮಸ್ಥರು ಇಟ್ಟಿಗೆ, ಬಾಂಬ್ ಎಸೆದು ಭದ್ರತಾಪಡೆಗಳ ಜೊತೆ ಸಂಘರ್ಷಕ್ಕಿಳಿದಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಪೊಲೀಸರು ಗೋಲಿಬಾರ್ ನಡೆಸಬೇಕಾಯಿತು. ಹಿಂಸಾಚಾರದಲ್ಲಿ 75ಕ್ಕೂ ಹೆಚ್ಚು ಜನ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮಮತಾ ಬ್ಯಾನರ್ಜಿ ಖಂಡನೆ : ಬುಧವಾರ(ಮಾರ್ಚ್ 14) ನಡೆದ ಈ ಘಟನೆಯನ್ನು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಲೋಕಸಭಾ ಸಂಸದೆ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಮಾಡಬೇಕೆಂದು ರಾಷ್ಟ್ರಪತಿಗಳಿಗೆ ಆಗ್ರಹಿಸಿದ್ದಾರೆ.
(ಏಜನ್ಸೀಸ್)