ಶಂಕರನಾರಾಯಣ ಸಮೀಪ ನಕ್ಸಲೀಯ ಮಹಿಳೆ ಬಂಧನ
ಕುಂದಾಪುರ : ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಸೇಬೈಲಿನಲ್ಲಿ ನಕ್ಸಲೀಯ ಮಹಿಳೆಯೋರ್ವಳು ಸಿಕ್ಕಿಬಿದ್ದಿದ್ದಾಳೆ.
ನಕ್ಸಲೀಯ ವಿರೋಧಿ ದಳಕ್ಕೆ ಸಿಕ್ಕಿಬಿದ್ದ ಯುವತಿ ಚೆನ್ನಮ್ಮ(20) ಎಂದು ಗುರುತಿಸಲಾಗಿದೆ. ಈಕೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹೆಮ್ಮಿಗೆಯವಳಾಗಿದ್ದು, ವಾರಾಹಿ ನಕ್ಸಲ್ ಗುಂಪಿನ ಸದಸ್ಯೆ ಎನ್ನಲಾಗಿದೆ.
ತೊಂಬಟ್ಟು ಎಂಬ ಊರಿಗೆ ಹೋಗಲು ಅಮ್ಸೇಬೈಲಿನಲ್ಲಿ ಆಕೆ ಬಸ್ಗಾಗಿ ಕಾಯುತ್ತಿದ್ದಳು. ಈ ಬಗ್ಗೆ ಸುಳಿವು ಪಡೆದಿದ್ದ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಚೆನ್ನಮ್ಮನಿಗಾಗಿ ಕಾಯುತ್ತಿದ್ದ ಆಕೆಯ ಕೆಲವು ಸಹಚರರು, ಬಂಧನದ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ಪರಾರಿಯಾದರು ಎಂದು ಮೂಲಗಳು ಹೇಳಿವೆ.
ಮೂರು ವರ್ಷಗಳ ಕೆಳಗೆ ‘ತುಂಗಭದ್ರಾ ಉಳಿಸಿ ಮಲೆನಾಡು ಉಳಿಸಿ’ ಚಳವಳಿ ದಾವಣಗೆರೆಯಲ್ಲಿ ನಡೆದಾಗ, ನಕ್ಸಲೀಯ ಪ್ರಭಾವಕ್ಕೆ ಒಳಗಾದೆ. ಆನಂತರ ನೀಲಗುಳಿ ಪದ್ಮನಾಭ ನೇತೃತ್ವದ ಗುಂಪಿಗೆ ಸೇರಿಕೊಂಡೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹೊಸಂಗಡಿಯಲ್ಲಿ ನಡೆದ ನಕ್ಸಲೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೆ ಎಂದು ಆಕೆ ವಿಚಾರಣೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ.
(ಏಜನ್ಸೀಸ್)