ಹಳ್ಳದಿಣ್ಣೆಯಿಂದ ಕೂಡಿದ ಕೆಎಸ್ಆರ್ಟಿಸಿ ಈ-ಟಿಕೆಟ್ ಸೇವೆ
ಬೆಂಗಳೂರು : ಕೆಎಸ್ಆರ್ಟಿಸಿ ಸಂಸ್ಥೆ, ತನ್ನ ಗ್ರಾಹಕರ ಉಪಯೋಗಕ್ಕಾಗಿ ಆನ್ಲೈನ್ ಬುಕ್ಕಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಇನ್ನು ಮುಂದೆ ಗಂಟೆಗಟ್ಟಲೆ ಟಿಕೆಟ್ ಕಾಯ್ದಿರಿಸಲು, ಮುಗಂಡ ಟಿಕೆಟ್ ಕೌಂಟರ್ ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ.
ಸಾರಿಗೆ ಸಚಿವ ಟಿ ಚೆಲುವರಾಯ ಸ್ವಾಮಿ ಈ ಸೌಲಭ್ಯವನ್ನು ಸೋಮವಾರ ಉದ್ಘಾಟಿಸಿದರು. ದೇಶದಲ್ಲೇ ಪ್ರಥಮ ಬಾರಿಗೆ, ಈ ರೀತಿಯ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಸಚಿವರ ಹೇಳಿದರು.
ಆದರೆ ಮಂಗಳವಾರ(ಮಾ.13) ಆನ್ಲೈನ್ ಸೇವೆ ಪಡೆಯಲು ಯತ್ನಿಸಿದ ಪ್ರಯಾಣಿಕರು, ವಿಫಲರಾಗಿದ್ದಾರೆ. ತಾಂತ್ರಿಕ ದೋಷವನ್ನು ಸಂಸ್ಥೆ ನಿವಾರಿಸಬೇಕಾಗಿದೆ.
ಸೇವೆ ಪಡೆಯುವುದು ಹೇಗೆ?
AWATAR(ಎನಿ ವೇರ್ ಎನಿ ಟೈಮ್ ಅಡ್ವಾನ್ಸ್ ರಿಸರ್ವ್ವೇಷನ್) ಎಂದು ಕರೆಯಲ್ಪಡುವ ಈ ಸೇವೆ, ಐಸಿಐಸಿಐ ಬ್ಯಾಂಕ್ನ ವೀಸಾ ಹಾಗೂ ಮಾಸ್ಟರ್ ಚಿನ್ಹೆ ಇರುವ ಕಾರ್ಡ್ಗಳ ಮೂಲಕ ಮಾತ್ರ ಚಾಲನೆಯಲ್ಲಿದೆ.
ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು ಕೂಡ ಇ-ಟಿಕೆಟಿಂಗ್ ಸೇವೆಯನ್ನು ಬಳಸಬಹುದಾಗಿದೆ. ಈ ಮುಂಚೆ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಬುಕ್ಕಿಂಗ್ ಏಜೆಂಟ್ಗಳು ಹಾಗೂ ಕೆಎಸ್ಆರ್ಟಿಸಿ ಕೌಂಟರ್ಗಳಲ್ಲಿ ಮಾತ್ರ ಕಲ್ಪಿಸಲಾಗಿತ್ತು. ಈಗ ಈ ಸೌಲಭ್ಯವನ್ನು ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ.
ತೊಡಕುಗಳು ಏನೇನು?
ಆದರೆ, ಸಮಸ್ಯೆ ಎಂದರೆ, www.ksrtc.in ಸೈಟ್ನಲ್ಲಿ ಟಿಕೆಂಟ್ ಬುಕ್ಕಿಂಗ್ ವಿಭಾಗಕ್ಕೆ ಹೋಗುವ ಮೊದಲು ಸದಸ್ಯರಾಗಬೇಕು. ಆದರೆ ಸದಸ್ಯತ್ವದ ಅರ್ಜಿಯಲ್ಲಿ ದೋಷಗಳಿವೆ. ಪೂರ್ಣ ವಿಳಾಸ ನೀಡಲಾಗುವುದಿಲ್ಲ. ಸದಸ್ಯರಾದವರು ಮತ್ತೆ ಲಾಗ್ ಇನ್ ಆಗುವುದು ಸ್ವಲ್ಪ ತ್ರಾಸದಾಯಕ.(ಬದಲಿ ಇ-ಮೇಲ್ ವಿಳಾಸ ಕೇಳುವುದಿಲ್ಲ).
ಪಾಸ್ವರ್ಡ್ ಮರೆತರೆ ನಿಮಗೆ ಸಹಾಯ ನೀಡಲು ಯಾವ ಸೌಲಭ್ಯವೂ ಇಲ್ಲ. ನಿಮ್ಮ ಐಡಿ ಹಾಗೂ ಪಾಸ್ವರ್ಡ್ ಬೇರೆಯವರು ಉಪಯೋಗಿಸಬಹುದು(3 ಪ್ರಯತ್ನದ ನಂತರ ಲಾಗ್ ಇನ್ ವಿಫಲವಾಗುವಂಥ ಸೌಲಭ್ಯವೂ ಇಲ್ಲ).
ದೋಷ ಪೂರಿತ ಸೌಲಭ್ಯವನ್ನು ಆದಷ್ಟು ಬೇಗ ಸರಿ ಮಾಡಿದರೆ, ನಿಜಕ್ಕೂ ಇದು ಸಾರ್ವಜನಿಕರಿಗೆ ಸರ್ಕಾರ ನೀಡಿದ ಉತ್ತಮ ಸೇವೆ ಎನಿಸುತ್ತದೆ.
(ದಟ್ಸ್ ಕನ್ನಡ ವಾರ್ತೆ)