ಬಳ್ಳಾರಿ: ಶಿಲಾಯುಗದ ಅವಶೇಷಗಳು ಗಣಿಗಾರಿಕೆಗೆ ಬಲಿ
ಬಳ್ಳಾರಿ : ಸಂಗನಕಲ್ಲಿನಲ್ಲಿರುವ ಹಳೆ ಶಿಲಾಯುಗ ಕಾಲದ ಅವಶೇಷಗಳು ಹಾಗೂ ಚಿತ್ರಗಳು, ಗಣಿಗಾರಿಕೆ ಫಲವಾಗಿ ನಾಶಗೊಳ್ಳುವ ಅಂಚಿನಲ್ಲಿವೆ. ವಿಶ್ವದೆಲ್ಲೆಡೆಯ ಪುರಾತತ್ವ ಸಂಶೋಧಕರನ್ನು ಆಕರ್ಷಿಸುತ್ತಿದ್ದ ಸಂಗನಕಲ್ಲು ಈಗ ತನ್ನ ಕಳೆ ಕಳೆದುಕೊಳ್ಳತೊಡಗಿದೆ.
ಪೂರ್ವ ಶಿಲಾಯುಗಕ್ಕೂ ಹಳೆಯದಾದ ಇಲ್ಲಿನ ಚಿತ್ರಗಳನ್ನು ಸಂರಕ್ಷಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಸಂಗನಕಲ್ಲು. ಕುರುಗೋಡು, ಹಿರೇಗುಡ್ಡ, ಸಿರಿವಾರ ಗುಡ್ಡ, ಸಣ್ಣ ರಾಸಮ್ಮ ಗುಡ್ಡ ಮತ್ತಿತರ ಸ್ಥಳಗಳಲ್ಲಿರುವ ಹಳೆಕಾಲದ ಚಿತ್ರಗಳು, ಕಲ್ಲಿನ ಕೆತ್ತನೆಗಳು, ಕೈಬರಹಗಳು ಹಾಗೂ ಇನ್ನಿತರ ಅಮೂಲ್ಯ ಅವಶೇಷಗಳು ಕ್ವಾರಿಗಳ ಕಾಟಕ್ಕೆ ತುತ್ತಾಗಿದೆ.
ದಶಕಗಳ ಹಿಂದೆ ಬ್ರೂಸ್ಪ್ಯೂಟ್, ಡಾ. ಎ. ಸುಂದರ್ ನಾಗರಾಜ ರಾವ್, ಆಲ್ಟಿನ್ ಅವರ ತಂಡ ಪೂರ್ವ ಶಿಲಾಯುಗದ ಕಾಲಕ್ಕೆ ಸೇರಿರಬಹುದಾದ ಮಡಿಕೆಗಳ ಚೂರು, ಚಿತ್ರಗಳು, ಕಲ್ಲಿನ ಆಕೃತಿಗಳು ಮುಂತಾದ ಅವಶೇಷಗಳನ್ನು ಕಷ್ಟಪಟ್ಟು ಶೋಧಿಸಿದ್ದರು.
ಇಲ್ಲಿನ ಚಿತ್ರಗಳಲ್ಲಿ ಮನುಷ್ಯರ ದೈನಂದಿನ ಕ್ರಿಯೆಗಳು, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಗುರುತುಗಳು, ದೈನಂದಿನ ಉಪಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಅಂದಿನ ಕಾಲದಲ್ಲಿ ನಡೆದಿರಬಹುದಾದ ಯಾಗಗಳು, ಬೇಟೆ, ಶವಸಂಸ್ಕಾರ ಕ್ರಮದ ಬಗ್ಗೆ ಅಧ್ಯಯನ ಮಾಡಲು ಈ ವಸ್ತುಗಳು ಸಹಾಯಕವಾಗಿದ್ದವು. ಆದರೆ ಗಣಿಗಾರಿಕೆಯಿಂದ ಚಿತ್ರಗಳು ಹಾಗೂ ಕಲ್ಲಿನ ಆಕೃತಿಗಳಿದ್ದ ಸುಮಾರು 20ಕ್ಕೂ ಹೆಚ್ಚು ಗುಹೆಗಳು ನಾಶಗೊಂಡಿದೆ. ಇದಲ್ಲದೇ ಜಿಲ್ಲೆಯ ಹಲವೆಡೆ ಸಂಗೀತದ ಕಂಪನ ಉಂಟು ಮಾಡುವ ಶಿಲೆಗಳು ಹೇರಳವಾಗಿ ಸಿಗುತ್ತಿದ್ದು, ಗಣಿಗಾರಿಕೆಯಿಂದ ಎಲ್ಲಾ ನಾಶಗೊಳ್ಳುತ್ತಿದೆ ಎಂದು ಡಾ. ಸುಂದರ್ ಹೇಳುತ್ತಾರೆ.
ಶಿಲಾಯುಗದ ಕಾಲದ ಅವಶೇಷ ಗಳನ್ನು ಉಳಿಸಬೇಕೆಂದು ಹವ್ಯಾಸಿ ಪುರಾತತ್ವ ಶೋಧಕ ಗುಂಪೊಂದು ಬಳ್ಳಾರಿ ಜಿಲ್ಲಾಧಿಕಾರಿ ಅರವಿಂದ ಶ್ರೀವಾಸ್ತವ ಅವರಿಗೆ ಮನವಿ ಮಾಡಿಕೊಂಡಿದೆ.
(ದಟ್ಸ್ ಕನ್ನಡ)