ಬೃಹತ್ ಸತ್ಯನಾರಾಯಣ ಸ್ವಾಮಿ ಪೂಜಾ ಮಹೋತ್ಸವ
ಮೈಸೂರು : ನಗರದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಸತ್ಯನಾರಾಯಣ ಸ್ವಾಮಿ ಪೂಜಾ ಮಹೋತ್ಸವವನ್ನು ಭಾನುವಾರ(ಮಾ.11) ಏರ್ಪಡಿಸಲಾಗಿದೆ. ವಿವಿಧ ಕಾರಣಗಳಿಂದ ಈ ಮಹೋತ್ಸವ ವಿಶೇಷತೆ ಪಡೆದಿದೆ.
ಜಾತಿಪಂಗಡಗಳ ಭೇದವಿಲ್ಲದೆ ನಡೆಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ, 75 ಜೋಡಿ ದಂಪತಿಗಳು ಪಾಲ್ಗೊಳ್ಳುತ್ತಿದ್ದಾರೆ. ನಗರದ ರಾಘವೇಂದ್ರ ಆರಾಧನಾ ಮಂದಿರ(ಕೃಷ್ಣಮೂರ್ತಿ ಪುರಂ)ದಲ್ಲಿ ಬೆಳಗ್ಗೆ 10.30ಕ್ಕೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮ, ಸಂಪೂರ್ಣ ಕನ್ನಡ ಮಯಂ. ಅಲ್ಲದೇ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತವನ್ನು ಆಯೋಜಕರು ಕೋರಿದ್ದಾರೆ.
ಇಲ್ಲಿ ಸತ್ಯನಾರಾಯಣ ಪೂಜೆ, ಕತೆ, ಮಂತ್ರ, ವಿವರಣೆ ಎಲ್ಲವೂ ಕನ್ನಡವೇ ಆಗಿರುತ್ತದೆ. ಇಷ್ಟು ಮಾತ್ರವಲ್ಲದೇ ಶಿಕಾರಿಪುರದ ಹರಿಹರೇಶ್ವರ ಅವರ ಪುಸ್ತಕವೊಂದು, ಈ ಸಂದರ್ಭದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಆ ಕೆಲಸವನ್ನು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ನೆರವೇರಿಸಲಿದ್ದಾರೆ.
ಸತ್ಯಾನಾರಾಯಣ ಸ್ವಾಮಿ ಕತೆ, ಪೂಜಾ ಮಹಾತ್ಮೆ ಮತ್ತು ವಿಧಿ-ವಿಧಾನವನ್ನು ಕನ್ನಡದಲ್ಲಿ ಪರಿಚಯಿಸಿರುವ ಹರಿಹರೇಶ್ವರ, ತಮ್ಮ ಕೃತಿಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ಅರ್ಪಿಸಿದ್ದಾರೆ.
ಪೂಜೆ ನಂತರ ರುಚಿಯಾದ ಸಪಾದ ಭಕ್ಷ್ಯದ ಪ್ರಸಾದವನ್ನು ವಿತರಿಸುವ ಕಾರ್ಯಕ್ರಮವಿದೆ. ನಿಮಗೆ ಗೊತ್ತಿರಲಿ -ಪೂಜೆಯೆಂದರೆ ಸತ್ಯನಾರಾಯಣ ಪೂಜೆಯಯ್ಯಾ, ರುಚಿಯೆಂದರೆ ಸಪಾದ ಭಕ್ಷ್ಯದ್ದಯ್ಯಾ...
(ದಟ್ಸ್ ಕನ್ನಡ ವಾರ್ತೆ)