ಬಳ್ಳಾರಿ ಗಣಿ ಹಗರಣಕ್ಕೆ ಹೊಸ ತಿರುವು : ರೆಡ್ಡಿ ಸಿಡಿಮಿಡಿ
ಬೆಂಗಳೂರು : ಮುಖ್ಯಮಂತ್ರಿಗಳ ವಿರುದ್ಧ ಕೇಳಿಬಂದಿದ್ದ 150 ಕೋಟಿ ರೂ.ಗಳ ಗಣಿ ಹಗರಣ, ಹೊಸ ತಿರುವು ಪಡೆದಿದೆ. ಹಗರಣದ ವಿಚಾರಣೆ ಮಾಡಲು ನೇಮಕಮಾಡಲಾಗಿದ್ದ ನ್ಯಾಯಮೂರ್ತಿ ಯು.ಎಲ್.ಭಟ್ ನೇತೃತ್ವದ ಆಯೋಗವನ್ನು, ರಾಜ್ಯ ಸಂಪುಟ ಗುರುವಾರ ವಜಾ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗೃಹಸಚಿವ ಎಂ.ಪಿ.ಪ್ರಕಾಶ್, ಈ ಗಣಿ ಹಗರಣದ ವಿಚಾರಣೆಯನ್ನು, ಲೋಕಾಯುಕ್ತಕ್ಕೆ ಒಪ್ಪಿಸಲು ಸಂಪುಟ ಸಮ್ಮತಿಸಿದೆ ಎಂದರು.
ಈ ಹಿಂದೆ ಗಣಿ ಹಗರಣದ ವಿಚಾರಣೆಗಾಗಿ ಸರ್ಕಾರ ರಚಿಸಿದ್ದ ಆಯೋಗಕ್ಕೆ, ವರದಿ ನೀಡಲು ಆರು ತಿಂಗಳ ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ವರದಿ ನೀಡಲು ವಿಫಲವಾದ ಆಯೋಗ, ಮತ್ತೆ ಆರು ತಿಂಗಳ ಸಮಯ ಕೇಳಿತ್ತು. ಈ ಮಧ್ಯೆ ಆಯೋಗದ ಅಧ್ಯಕ್ಷ ಭಟ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಆಯೋಗದ ಬಗ್ಗೆ ಪ್ರತಿಪಕ್ಷಗಳ ಟೀಕೆಗಳೂ ಕೇಳಿಬಂದಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ಆಯೋಗವನ್ನು ರದ್ದು ಪಡಿಸಲು ಸಂಪುಟ ತೀರ್ಮಾನಿಸಿತು ಎಂದು ಎಂ.ಪಿ.ಪ್ರಕಾಶ್ ವಿವರಿಸಿದ್ದಾರೆ.
ಜನಾರ್ದನ ರೆಡ್ಡಿ ವಿರೋಧ : ಸಂಪುಟದ ತೀರ್ಮಾನವನ್ನು ವಿರೋಧಿಸಿರುವ ವಿಧಾನ ಪರಿಷತ್ತು ಸದಸ್ಯ ಜನಾರ್ದನ ರೆಡ್ಡಿ, ಗಣಿ ಲಂಚ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆಗ ಮುಖ್ಯಮಂತ್ರಿಗಳ ಅಸಲಿ ಬಣ್ಣ ಬಯಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಯುಎನ್ಐ)