‘ ಮೆಟ್ರೋ ಯೋಜನೆ’ಗೆ ಚಿರಂಜೀವಿ ಸಿಂಗ್ ವಿರೋಧ
ಬೆಂಗಳೂರು : ಮೆಟ್ರೋ ರೈಲು ಯೋಜನೆ ಅನುಷ್ಠಾನಗೊಂಡರೆ ನಗರದ ಸಂಚಾರ ವ್ಯವಸ್ಥೆ ಮತ್ತಷ್ಟು ಸಂಕಟಮಯವಾಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
‘ನಮ್ಮ ಬೆಂಗಳೂರು : ನಾಗರಿಕರ ವೇದಿಕೆ’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮೆಟ್ರೋ ರೈಲು ಸಂಚಾರ ಸಮಸ್ಯೆಯನ್ನು ನೀಗಿಸಲಿದೆ ಎಂದು ಅನೇಕರು ಭಾವಿಸಿದ್ದಾರೆ. ಇದು ಮೂರ್ಖ ಯೋಚನೆ. ಯೋಜನೆ ಅನುಷ್ಠಾನಗೊಂಡರೆ ಸಾರಿಗೆ ಸ್ಥಿತಿ ಮತ್ತಷ್ಟೂ ಹದಗೆಡಲಿದೆ. ಸರ್ಕಾರ, ಮಹಾನಗರಪಾಲಿಕೆ, ಉದ್ಯಮಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ಮಾಲೀಕರು ನಗರವನ್ನು ಹೃದಯಹೀನಗೊಳಿಸಿದ್ದಾರೆ ಎಂದು ಆರೋಪಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮಾತನಾಡಿ, ಮಕ್ಕಳು ಹಾಗೂ ವೃದ್ಧರ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಗಣಿಸದಿದ್ದರೆ ನಗರಾಭಿವೃದ್ಧಿ ಪೂರ್ಣಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಎ.ರವೀಂದ್ರ ಮಾತನಾಡುತ್ತಾ, ಹಲವು ಭಾಷೆ, ಧರ್ಮ ಮತ್ತು ಸಂಸ್ಕೃತಿಗಳ ಜನರು ಒಟ್ಟಿಗೆ ಜೀವಿಸುವುದು ಬೆಂಗಳೂರಿನ ವೈಶಿಷ್ಟ್ಯ. ಈ ವೈವಿಧ್ಯವನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನಗಳು ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಿರಂಜೀವಿ ಸಿಂಗ್ ಆಯ್ಕೆ : ನವದೆಹಲಿಯಲ್ಲಿ ಏ.7ಮತ್ತು 8ರಂದು ನಡೆಯಲಿರುವ 24ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಆಧಿಕಾರಿ ಜಿರಂಜೀವಿ ಸಿಂಗ್ರನ್ನು ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಸಮ್ಮೇಳನ ಆಯೋಜಿಸಿರುವ ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬ.ಸಾಮಗ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)