ಮೂವರನ್ನು ಸಾಯಿಸಿದ ಕುಡುಕ ಚಾಲಕನ ಬಂಧನ
ಬೆಂಗಳೂರು : ಶುಕ್ರವಾರ(ಮಾ. 02) ರಾತ್ರಿ ಮೂವರನ್ನು ತನ್ನ ವೇಗದ ಕಾರಿಗೆ ಬಲಿ ತೆಗೆದುಕೊಂಡಿದ್ದ ನಿಖಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರ್ .ಟಿ. ನಗರ ದ ತನ್ನ ಮನೆಯಲ್ಲಿ ಆರೋಪಿ ಕಾರನ್ನು ದುರಸ್ತಿ ಮಾಡುತ್ತಿದ್ದಾಗ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ನಾನು ಬೇಕೆಂದು ಅಪಘಾತ ಮಾಡಲಿಲ್ಲ. ಕಾರು ನಿಯಂತ್ರಣ ತಪ್ಪಿದ್ದು ನಿಜ. ಮದ್ಯ ಸೇವಿಸಿದ್ದರಿಂದ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಭಯ ಹಾಗೂ ಸಾರ್ವಜನಿಕ ಭೀತಿಯಿಂದ ಓಡಿಹೋದೆ ಎಂದು ನಿಖಿಲ್ ತಪ್ಪೋಪ್ಪಿಗೆ ನೀಡಿದ್ದಾನೆ.
ನಿಖಿಲ್ನ ರಕ್ತ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಡಿಸಿಪಿ ಸಲೀಂ ಹೇಳಿದ್ದಾರೆ.
ಈ ಮಧ್ಯೆ ಜಿಪಿಓನ ಸಿಬ್ಬಂದಿಗಳು ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಪಾಳಿಗೂ ಕ್ಯಾಂಟೀನ್ ವ್ಯವಸ್ಥೆ ಇದ್ದಿದ್ದರೆ ಮೂವರ ಜೀವ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ:ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ನೌಕರರಾದ ಶಿವಪ್ಪ ಹುರಳಿಹಾಳ(39), ಲಿಂಗರಾಜಪುರದ ಕೆ.ವಿನ್ಸೆಂಟ್(36) ಹಾಗೂ ಕಾವಲ್ ಭೈರಸಂದ್ರದ ಶ್ರೀನಾಥ್(46) ಎಂಬ ರಾತ್ರಿ ಪಾಳಿಯಲ್ಲಿದ್ದ ಈ ಮೂವರು ಊಟಕ್ಕೆಂದು ಸಿಟಿಓ ವೃತ್ತದಲ್ಲಿ ರಸ್ತೆ ದಾಟುತ್ತಿದ್ದಾಗ, ಮಹಾತ್ಮ ಗಾಂಧಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಜೆನ್ ಕಾರು ಡಿಕ್ಕಿ ಹೊಡೆಯಿತು. ಕೂಡಲೇ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.
ಈ ದುರ್ಘಟನೆಯ ಸ್ಥಳದಲ್ಲಿ ದೊರೆತ ನಂಬರ್ ಪ್ಲೇಟ್ನಿಂದ , ಕಾರಿನ ಮಾಲೀಕ ಹುಬ್ಬಳಿಯಲ್ಲಿರುವ ವೈದ್ಯ ಗಣೇಶ್. ಎಸ್ .ತನವಾಡೆ ಎಂದು ತಿಳಿಯಿತು. ಔಟ್ಲುಕ್ ನಿಯತಕಾಲಿಕದ ಮಾರುಕಟ್ಟೆ ವ್ಯವಸ್ಥಾಪಕ ನಿಖಿಲ್ತನವಾಡೆ(29) ವೈದ್ಯರ ಮಗ ಎಂದು ಗುರುತಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)