ಹುಚ್ಚುನಾಯಿ ಸಂಹಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಬೆಂಗಳೂರು : ಹುಚ್ಚುಹಿಡಿದ ಹಾಗೂ ಉಗ್ರ ಬೀದಿ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವಂತೆ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಚಂದ್ರಾಲೇಔಟ್ನಲ್ಲಿ 6ವರ್ಷದ ಬಾಲಕಿ ಶ್ರೀದೇವಿ ಹಾಗೂ ಬಿಇಎಂಎಲ್ ಲೇಔಟ್ನಲ್ಲಿ 4ವರ್ಷದ ಬಾಲಕ ಮಂಜುನಾಥ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಮಹಾನಗರಪಾಲಿಕೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್.ಅಶೋಕ್ ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದರು.
ಬೀದಿ ನಾಯಿಗಳು ಗುಂಪುಗುಂಪಾಗಿ ಕಂಡುಬಂದರೆ ಹಾಗೂ ಹುಚ್ಚು ಹಿಡಿದ ಮತ್ತು ರೋಗಗ್ರಸ್ಥ ನಾಯಿಗಳು ಕಣ್ಣಿಗೆ ಬಿದ್ದರೆ ಕೊಲ್ಲುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನಾಯಿಗಳನ್ನು ಕೊಲ್ಲಲು ರಾಜ್ಯ ಸರ್ಕಾರಕ್ಕೆ ಪರವಾನಿಗೆ ಇಲ್ಲ. ಇದಕ್ಕೆ ಸಂಬಂಧಪಟ್ಟ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಅವರು ವಿವರಿಸಿದರು.
(ಯುಎನ್ಐ)