ನ್ಯಾಯಕ್ಕಾಗಿ ದೆಹಲಿಯಲ್ಲಿ ‘ಕರವೇ’ಯಿಂದ ಕನ್ನಡ ಕೂಗು!
ಬೆಂಗಳೂರು : ಕರ್ನಾಟಕ ಎದುರಿಸುತ್ತಿರುವ ಅನೇಕಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶುಕ್ರವಾರ ದೆಹಲಿಗೆ ಮುತ್ತಿಗೆ ಹಾಕಿದ್ದಾರೆ.
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ವೇದಿಕೆಯ ಬೃಹತ್ ನಿಯೋಗ ದೆಹಲಿಯಲ್ಲಿ ಕನ್ನಡದ ಕೂಗು ಹಾಕುತ್ತಿದೆ. 250 ಮಹಿಳಾ ಸದಸ್ಯರೂ ಸೇರಿದಂತೆ ರಕ್ಷಣಾ ವೇದಿಕೆಯ 1500 ಸದಸ್ಯರು, ದಿಲ್ಲಿ ಚಲೋ ಜಾಥಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾವೇರಿ ನೀರು ಹಂಚಿಕೆ ನ್ಯಾಯ ಮಾತ್ರವಲ್ಲದೆ, ಎಲ್ಲ ರಂಗಗಳಲ್ಲೂ ರಾಜ್ಯಕ್ಕೆ ಉಂಟಾಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸಿ ರಾಜಧಾನಿ ವಲಯಗಳಲ್ಲಿ ನ್ಯಾಯದ ಗಂಟೆ ಬಾರಿಸುವುದೇ ಈ ಜಾಥಾದ ಉದ್ದೇಶ.
ಕಳೆದ ಸೋಮವಾರ ಬೆಂಗಳೂರಿನಿಂದ ಸಂಪರ್ಕ ಎಕ್ಸಪ್ರೆಸ್ ಮೂಲಕ ದೆಹಲಿಗೆ ಧಾವಿಸಿದ್ದ ಕನ್ನಡಿಗರ ಸಮೂಹ, ಶುಕ್ರವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿಯ ಅಂಬೇಡ್ಕರ್ ಭವನದಬಳಿ ಜಮಾಯಿಸಿದೆ. ಅಲ್ಲಿಂದ ಜಂತರ್ ಮಂತರ್ವರೆಗೆ ಮೆರವಣಿಗೆ ನಡೆಯಲಿದೆ.
ಜಂತರ್ ಮಂತರ್ನಲ್ಲಿ ಭಾರೀ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಕರ್ನಾಟಕದ ಎಲ್ಲ ಲೋಕಸಭಾ ಸದಸ್ಯರು, ರಾಜ್ಯಸಭಾಸದಸ್ಯರು ಮತ್ತು ದಿಲ್ಲಿಯಲ್ಲಿ ನೆಲೆಸಿರುವ ಕನ್ನಡಿಗರನ್ನು ಆಹ್ವಾನಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಜಿಜೆಪಿ ಸದಸ್ಯ ಅನಂತ್ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ರಕ್ಷಣಾ ವೇದಿಕೆ ಮೂಲಗಳು ಹೇಳಿವೆ.
ಅಂತೂ ದೆಹಲಿಯಲ್ಲಿ ಕನ್ನಡ ಧ್ವಜ ಮತ್ತು ಕನ್ನಡ ಕಳಕಳಿಯನ್ನು ಸಾರುವ ಭಿತ್ತಿಪತ್ರಗಳು ಮತ್ತು ಬ್ಯಾನರ್ಗಳು ರಾರಾಜಿಸುವ ದಿನಗಳು ಬಂದಿವೆ. ಜಂತರ್ಮಂತರ್ ಪ್ರದೇಶದಲ್ಲಿ ಪ್ರತಿಭಟನೆ ನಂತರ ವೇದಿಕೆಯ ಕಾರ್ಯಕರ್ತರು ಪ್ರಧಾನಿ ನಿವಾಸದ ತನಕ ಮೆರವಣಿಗೆ ಹೊರಡುತ್ತಾರೆ.
ಪ್ರಧಾನಿ ಮನ್ಮೋಹನ್ಸಿಂಗ್ ಅವರನ್ನು ಸಂಜೆ 5.30ಕ್ಕೆ ಭೇಟಿ ಮಾಡಿ ವೇದಿಕೆ ಸದಸ್ಯರು, ‘ ಸ್ವಾಮಿ, ಕರ್ನಾಟಕ ಏನು ತಪ್ಪುಮಾಡಿದೆ? ನಮಗೇಕೀ ಅನ್ಯಾಯ? ನಾವೇನು ಕೇಂದ್ರ ಸರ್ಕಾರದ ಮಲತಾಯಿ ಮಕ್ಕಳಾ?’ ಎಂದು ಕೇಳಲಿದ್ದಾರೆ.
ಕರ್ನಾಟಕಕ್ಕೆ ಅನ್ಯಾಯವಾಗಿರುವ ಕೈಬೆರಳೆಣಿಕೆಯಷ್ಟು ಕ್ಷೇತ್ರಗಳು ಇಂತಿವೆ : ಗಡಿ, ನೀರು, ಸಂಪರ್ಕ, ಶಿಕ್ಷಣ, ಮೂಲಭೂತ ಸೌಕರ್ಯ, ಕೇಂದ್ರದಿಂದ ಬರಬೇಕಾದ ಅನುದಾನ ಗಾತ್ರ. ಮತ್ತು ಕರ್ನಾಟಕದ ಬಗೆಗೆ ಪ್ರೀತಿ.
(ದಟ್ಸ್ಕನ್ನಡ ವಾರ್ತೆ)