ಬಜೆಟ್ ನಿರಾಶಾದಾಯಕ : ಕೈಗಾರಿಕಾ ಸಚಿವರ ವಿಮರ್ಶೆ
ಬೆಂಗಳೂರು : 2007-08ನೇ ಸಾಲಿನ ಕೇಂದ್ರೀಯ ಬಜೆಟ್ ನಿರಾಶಾದಾಯಕವಾಗಿದ್ದು, ಜನಸಾಮಾನ್ಯರ ಹೊರೆ ಇಳಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಅವರು ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಸ್ತಾವನೆಗಳ ಪ್ರಕಾರ ಹೋದರೂ ನಿರೀಕ್ಷಿತ ಶೇಕಡಾ 9.2ರಷ್ಟು ಜಿಡಿಪಿ(ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಬೆಳವಣಿಗೆ ಸಾಧಿಸುವುದು ಕಷ್ಟ. ವಿದ್ಯುತ್ ಕ್ಷೇತ್ರದ ಕುರಿತು ಬಜೆಟ್ ಮೌನ ತಾಳಿದೆ ಎಂದರು.
1ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಉಳ್ಳವರಿಗೆ ಮಾತ್ರ ಶೇಕಡಾ 3ರಷ್ಟು ಆದಾಯ ತೆರಿಗೆ ಸರ್ಚಾರ್ಜ್ ನೀಡಲಾಗಿದೆ. ಇದನ್ನು ಇತರರಿಗೆ ನೀಡಲಾಗಿಲ್ಲ ಎಂದು ಅವರು ಟೀಕಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವ ಕ್ರಮಗಳ ಕುರಿತು ಏನೂ ಹೇಳಲಾಗಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮೀಸಲಿರಿಸಲಾಗಿಲ್ಲ. ಇದೇ ಪದ್ಧತಿ ಮುಂದುವರಿದರೆ, ಹಣದುಬ್ಬರ ಇನ್ನೂ ಹೆಚ್ಚಾಗಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರವಾಸೋದ್ಯಮ ವಿಭಾಗಕ್ಕೆ, ಕಳೆದ ವರ್ಷಕ್ಕಿಂತ ಕೇವಲ 97ಕೋಟಿ ರೂಪಾಯಿ ಹೆಚ್ಚಿಗೆ ನೀಡಲಾಗಿದೆ. ದೇಶದ 27ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಈ ಮೊತ್ತ ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದರು.
(ಯುಎನ್ಐ)