ಯಡಿಯೂರಪ್ಪಗೆ ದೇವೇಗೌಡರಿಂದ ತಿರುಪತಿ ನಾಮ!?
ಬೆಂಗಳೂರು : ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಡಗರ ಹಂಚಿಕೊಳ್ಳಲು ತಮ್ಮ ಪಕ್ಷದ ಶಾಸಕರೊಂದಿಗೆ ಅವರು ತಿರುಪತಿಗೆ ತೆರಳಿದ್ದಾರೆ.
ಮಂಗಳವಾರ 65ನೇ ಹುಟ್ಟುಹಬ್ಬ ಆಚರಿಸಿಕೊಂಡ ಯಡಿಯೂರಪ್ಪ, ಮುಂದಿನ ಮುಖ್ಯಮಂತ್ರಿಯಾಗುವ ಕನಸಿನಲ್ಲಿದ್ದಾರೆ. ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆದ ಒಪ್ಪಂದದಂತೆ ಕಡೆಯ 20ತಿಂಗಳ ಆಡಳಿತವನ್ನು ಬಿಜೆಪಿಗೆ ಕುಮಾರಸ್ವಾಮಿ ಬಿಟ್ಟುಕೊಡಬೇಕು. ಆದರೆ ಪರಿಸ್ಥಿತಿ ತಿಳಿಯಾಗಿಲ್ಲ.
ಈ ಮಧ್ಯೆ ಸೋನಿಯಾ ಜೊತೆ ನಡೆದ ದೇವೇಗೌಡರ ಭೇಟಿ ಏನೇನನ್ನೋ ಧ್ವನಿಸುತ್ತಿದೆ. ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವುದಾದರೆ, ಕಾಂಗ್ರೆಸ್ ಜೊತೆ ಕೈಜೋಡಿಸುತ್ತೇವೆ. ಅದು ಅಸಾಧ್ಯವಾದರೆ, ಹೊಸ ಸರ್ಕಾರದಲ್ಲಿ ರೇವಣ್ಣನಿಗೆ ಉಪ ಮುಖ್ಯಮಂತ್ರಿ ಪದವಿ ನೀಡಬೇಕೆಂದು ದೇವೇಗೌಡರು, ಸೋನಿಯಾ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಧಿಕಾರಕ್ಕಾಗಿ ಬಿಜೆಪಿ ಹಿಂದೆ ಬಂದ ಜೆಡಿಎಸ್, ಕಾಂಗ್ರೆಸ್ ಹಿಂದೆ ಹೋಗುವುದಿಲ್ಲ ಎಂದು ಹೇಳುವಂತಿಲ್ಲ.
ಈ ಮಾತುಗಳು ನಿಜವಾದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಕನಸಿನ ಮಾತು. ತಿರುಪತಿ ವೆಂಕಟೇಶ್ವರ ಸ್ವಾಮಿ, ಯಡಿಯೂರಪ್ಪನವರಿಗೆ ಆಶೀರ್ವಾದ ಮಾಡುವನೇನೋ ನೋಡೋಣ!
(ದಟ್ಸ್ ಕನ್ನಡ ವಾರ್ತೆ)