ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಈಗೇನು ಮಾಡುತ್ತಿದ್ದಾರೆ?
ಚೆನ್ನೈ : ಕುಖ್ಯಾತ ದಂತಚೋರ ವೀರಪ್ಪನ್ ಜೀವನ ಚರಿತ್ರೆಯನ್ನು ಬರೆಯಲು, ಆತನ ಪತ್ನಿ ಮುತ್ತುಲಕ್ಷ್ಮಿ ನಿರ್ಧರಿಸಿದ್ದಾರೆ. ವೀರಪ್ಪನ್ರ ಇನ್ನೊಂದು ಮುಖ ಪುಸ್ತಕದಲ್ಲಿ ಅನಾವರಣಗೊಳ್ಳುವ ಸಾಧ್ಯತೆಗಳಿವೆ.
ಈ ಬಗ್ಗೆ ಯುಎನ್ಐ ಜೊತೆ ಮಾತನಾಡುತ್ತಿದ್ದ ಮುತ್ತುಲಕ್ಷ್ಮಿ, ವೀರಪ್ಪನ್ ಕುರಿತು ಸಮಗ್ರವಾಗಿ ಮತ್ತು ಸಮರ್ಪಕವಾಗಿ ಬರೆಯಲು ಆತನ ಪತ್ನಿಯಾದ ನನ್ನಿಂದ ಮಾತ್ರ ಸಾಧ್ಯ. ಈ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೇನೆ ಎಂದರು.
ನಮ್ಮ ದಾಂಪತ್ಯ ಜೀವನ, ಕಾಡಿನಲ್ಲಿ ಕಳೆದ ಆ ದಿನಗಳು, ನಮ್ಮಿಬ್ಬರ ನಡುವಿನ ಮಧುರ ಬಾಂಧವ್ಯಗಳನ್ನು ಪುಸ್ತಕದಲ್ಲಿ ದಾಖಲಿಸುತ್ತೇನೆ. ಮುಂದಿನ 15-20ದಿನದಲ್ಲಿ ಈ ಕಾರ್ಯ ಮುಕ್ತಾಯವಾಗುತ್ತದೆ. ವೀರಪ್ಪನ್ ಜೀವನಚರಿತ್ರೆಯನ್ನು ಪುಸ್ತಕದ ಜೊತೆಗೆ ಟೀವಿ ಸೀರಿಯಲ್ ಅಥವಾ ಸಿನಿಮಾ ಮಾಡುವ ಹಂಬಲವೂ ಇದೆ ಎಂದು ಮುತ್ತುಲಕ್ಷ್ಮಿ ತಿಳಿಸಿದರು.
ವೀರಪ್ಪನ್ ಬಗೆಗಿನ ಕನ್ನಡ ಸಿನಿಮಾದಲ್ಲಿ ನಟಿಸಲು 50ಸಾವಿರ ರೂ.ಗಳ ಸಂಭಾವನೆ ನೀಡುವುದಾಗಿ ನಿರ್ದೇಶಕ ಎ.ಎಂ.ಆರ್.ರಮೇಶ್ ಹೇಳಿದರು. ಆದರೆ ನನಗದರಲ್ಲಿ ಆಸಕ್ತಿಯಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ನಿರ್ದೇಶಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.
ನನ್ನ ಗಂಡನ ಹೆಸರಲ್ಲಿ ಕೆಲವರು ಹಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ನಾನು ತಡೆಯುತ್ತೇನೆ. ನನ್ನ ಗಂಡನ ಬದುಕಿಗೆ ಅಪಮಾನವಾಗುವಂತೆ ಪ್ರಸಾರವಾಗುತ್ತಿರುವ ತಮಿಳು ಧಾರಾವಾಹಿ ಪ್ರಸಾರಕ್ಕೆ ತಡೆಯಾಡ್ಡುವಂತೆ ಹೈಕೋರ್ಟ್ಗೆ ಮೊರೆ ಹೋಗಿರುವುದಾಗಿ ಮುತ್ತುಲಕ್ಷ್ಮಿ ತಿಳಿಸಿದರು.
1991ರಲ್ಲಿ ವೀರಪ್ಪನ್ನನ್ನು ಮದುವೆಯಾದ ಮುತ್ತುಲಕ್ಷ್ಮಿ, ಮದುವೆಯಾದ ಒಂದೇ ವರ್ಷದಲ್ಲಿ ತಾಯಿಯಾದರು. ಮೊದಲ ಮಗಳ ಹೆಸರು :ವಿದ್ಯಾರಾಣಿ. 1993ರಲ್ಲಿ ಪೊಲೀಸರು ಮುತ್ತುಲಕ್ಷ್ಮಿಯನ್ನು ಬಂಧಿಸಿದ್ದರು. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕಾಡಿಸಿದ್ದ ವೀರಪ್ಪನ್ ಅ.18,2004ರಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದನು.
(ಯುಎನ್ಐ)