ಕಲಾಂರಿಂದ ಕಷ್ಟ ಕರಗಲಿಲ್ಲ... ಆದ್ರೆ ಇನ್ನಷ್ಟು ಕಗ್ಗಂಟು!
ಗುಲ್ಬರ್ಗ : ನಿರುದ್ಯೋಗ ಸಮಸ್ಯೆಯನ್ನು ಬಿಂಬಿಸಿ ರಾಷ್ಟ್ರಪತಿಗಳ ಎದುರು, ಆತ್ಮಹತ್ಯೆ ಪ್ರಯತ್ನ ನಡೆಸಿದ ನಾಲ್ವರು ಯುವಕರ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುನೀಶ್ ಕಬೀರ್ಕರ್, ಆತ್ಯಹತ್ಯೆಗೆ ಯತ್ನಿಸಿದ ಯುವಕರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಸೆಕ್ಷನ್ 309ರನ್ವಯ ಮೊಕದ್ದಮೆ ದಾಖಲಿಸಲಾಗಿದೆ ಎಂದರು.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ, ವೈದ್ಯಕೀಯ ವರದಿಗಳನ್ನು ನಿರೀಕ್ಷಿಸುತ್ತಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಘಟನೆ ನಡೆದಾಗ ರಾಷ್ಟ್ರಪತಿಗಳು ಈ ಬಗ್ಗೆ ವಿಚಾರಿಸಿದರು. ನಂತರ ಈ ಬಗ್ಗೆ ವಿವರಗಳನ್ನು ಕೇಳಿಲ್ಲ ಎಂದು ವಿವರಣೆ ನೀಡಿದ್ದಾರೆ.
ಹಿನ್ನೆಲೆ : ಶ್ರೀನಿವಾಸ ಸರಡಗಿಯಲ್ಲಿ ಸುವರ್ಣ ಗ್ರಾಮೋದಯ ಯೋಜನೆಗೆ, ರಾಷ್ಟ್ರಪತಿಗಳು ಚಾಲನೆ ನೀಡುವ ಸಮಾರಂಭದಲ್ಲಿ ಯುವಕರು ವಿಫಲ ಆತ್ಮಹತ್ಯೆ ಪ್ರಯತ್ನ ನಡೆಸಿದ್ದರು. ಕೆಪಿಟಿಸಿಎಲ್ ನಡೆಸುವ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಈ ಯುವಕರು ವ್ಯಾಸಂಗ ಮಾಡಿ, ಉತ್ತೀರ್ಣರಾಗಿದ್ದರು. ಕೆಪಿಟಿಸಿಎಲ್ ನೇಮಕಾತಿಯಲ್ಲಿ ಐಟಿಸಿ ತರಬೇತಿ ಪಡೆದವರಿಗೆ ಶೇ.33ರಷ್ಟು ಮೀಸಲಾತಿಗಾಗಿ ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಸ್ಪಂದನ ದೊರೆಯದ ಕಾರಣ, ಆತ್ಮಹತ್ಯೆ ಮೂಲಕ ರಾಷ್ಟ್ರಪತಿಗಳ ಗಮನ ಸೆಳೆಯಲು ಯತ್ನಿಸಿದ್ದರು.
ಈ ಹಿಂದಿನ ಧರ್ಮಸಿಂಗ್ ನಾಯಕತ್ವದ ರಾಜ್ಯ ಸರ್ಕಾರ, ಶೇ.33ರ ಮೀಸಲಾತಿಯನ್ನು ನೀಡುತ್ತಿತ್ತು. ಈಗಿನ ಸರ್ಕಾರ, ಮೀಸಲಾತಿ ತೆರವುಗೊಳಿಸಿರುವ ಅಂಶ ಇಲ್ಲಿ ಗಮನಾರ್ಹ.
(ಯುಎನ್ಐ)