ರಸ್ತೆ ನಿಯಮ ಮುರುಕರಿಗೆ ಗುಲಾಬಿ ಹೂವಿನ ಕಾಣಿಕೆ!
ಬೆಂಗಳೂರು : ರಸ್ತೆಯಲ್ಲಿ ಪೊಲೀಸ್ ಮಾಮಾ ಇಲ್ಲದೇ ಇದ್ರೆ, ವಾಹನ ಸವಾರರಿಗೆ ಖುಷಿಯೋ ಖುಷಿ! ನಿಯಮ ಮುರಿಯೋದರಲ್ಲಿ ಏನೋ ಒಂದು ರೀತಿ ಸಾಧನೆ ಮಾಡಿದ ತೃಪ್ತಿ! ರಸ್ತೆ ನಿಯಮ ಮುರಿದು ಕೆಲವು ಸಲ ದಂಡ ಕಟ್ಟಿದ್ದು ಬಹುಮಂದಿಗೆ ನೆನಪಿರುತ್ತದೆ! ಆದರೆ ಚಾಳಿ ಬದಲಾಗೋದಿಲ್ಲ!
ಆದರೆ ನಗರದಲ್ಲಿ ಈಗ ಹೊಸ ಚಳವಳಿ ಆರಂಭಗೊಂಡಿದೆ. ನೀವು ರಸ್ತೆ ನಿಯಮ ಮುರಿದ ತಕ್ಷಣ, ನಿಮಗೆ ಚಾಕಲೇಟ್ ಅಥವಾ ಗುಲಾಬಿ ಕಾಣಿಕೆಯಾಗಿ ಸಿಗುತ್ತದೆ. ಜೊತೆಗೊಂದು ಗ್ರೀಟಿಂಗ್ ಕಾರ್ಡೂ ಇರುತ್ತದೆ!
ಗಾಂಧಿಮಾರ್ಗದಲ್ಲಿ ವಾಹನ ಸವಾರರಿಗೆ ಬುದ್ಧಿ ಹೇಳಲು, ಇಂತಹ ವಿನೂತನ ಕಾರ್ಯಕ್ರಮವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಮಕ್ಕಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ. ತನ್ನ ಮೊದಲ ಪ್ರಯೋಗವನ್ನು ಬ್ರಿಗೇಡ್ ರಸ್ತೆಯಲ್ಲಿ ಯಶಸ್ವಿಯಾಗಿ ಇತ್ತೀಚೆಗೆ ನಡೆಸಿದೆ.
ಹೆಚ್ಚು ಹೊಗೆ ಉಗುಳುವ ನೂರಾರು ವಾಹನಗಳನ್ನು ಪತ್ತೆ ಹಚ್ಚಿ, ಕಾಣಿಕೆಗಳನ್ನು ನೀಡಿ ತಿಳಿ ಹೇಳುವ ಕೆಲಸ ನಡೆದಿದೆ. ತಮ್ಮ ಬೇಜವಾಬ್ದಾರಿಯಿಂದ ವಾಹನ ಚಾಲಕರು ಮತ್ತು ಮಾಲೀಕರು ನಾಚಿ ನೀರಾಗಿದ್ದಾರೆ! ಈ ಪರಿಸ್ಥಿತಿ ನಿಮಗೆ ಬಾರದಿರಲಿ!
(ದಟ್ಸ್ ಕನ್ನಡ ವಾರ್ತೆ)