5ನೇ ವೇತನ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ
ಬೆಂಗಳೂರು : ರಾಜ್ಯದ ಐದನೇ ವೇತನ ಆಯೋಗ ಸರ್ಕಾರಿ ನೌಕರರ ಮೂಲವೇತನವನ್ನು ಶೇಕಡಾ 17.5ರಷ್ಟು ಹೆಚ್ಚಿಸಬೇಕೆಂದು ಶಿಫಾರಸು ಮಾಡಿದೆ.
ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ಪ್ರಕಾಶ್ ನೇತೃತ್ವದ ಆಯೋಗ ಶಿಫಾರಸನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿತು.
ಕನಿಷ್ಠ ಏರಿಕೆ 525ರೂಪಾಯಿ ಹಾಗೂ ಗರಿಷ್ಠ ಏರಿಕೆ 4,400ರೂಪಾಯಿ ಆಗಬೇಕು. ಡಿಎ(ಡಿಯರ್ನೆಸ್ ಅಲೋವನ್ಸ್) ಸೇರಿದಂತೆ ಹೊಸ ಮೂಲವೇತನ ತಿಂಗಳಿಗೆ ಕನಿಷ್ಠ ಹಂತದಲ್ಲಿ 4,800ರೂಪಾಯಿ(4,275ರಿಂದ) ಹಾಗೂ ಗರಿಷ್ಠ ಹಂತದಲ್ಲಿ 39,900ರೂಪಾಯಿ(35,431ರಿಂದ) ಇರಬೇಕು. ಕನಿಷ್ಠ ಪಿಂಚಣಿಯನ್ನು 1,804ರೂಪಾಯಿಯಿಂದ 2,250ರೂಪಾಯಿವರೆಗೆ ಹೆಚ್ಚಿಸಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.
ನಿವೃತ್ತಿ ವೇತನವನ್ನು ಈಗಿರುವ ಹತ್ತು ತಿಂಗಳ ಸರಾಸರಿ ಬದಲು ನಿವೃತ್ತಿ ತಿಂಗಳ ಮೂಲವೇತನದ ಶೇಕಡಾ 50ಕ್ಕೆ ನಿಗದಿಪಡಿಸಲಾಗಿದೆ. ಈಗಿರುವ 20ವೇತನ ಶ್ರೇಣಿಗಳ ಬದಲಿಗೆ 25 ವೇತನ ಶ್ರೇಣಿಗಳನ್ನು ರಚಿಸಲಾಗಿದೆ. ಮರಣ, ನಿವೃತ್ತಿ ಉಪದಾನದ ಗರಿಷ್ಠ ಮಿತಿಯನ್ನು 2,50,000ರೂಪಾಯಿಯಿಂದ 3,00,000ರೂಪಾಯಿಗೆ ಏರಿಸಬೇಕೆಂದು ಶಿಫಾರಸು ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)