ಮಂಗಳೂರಿನಲ್ಲಿ ಸಮುದ್ರವಿದ್ದರೂ ಈಗ ನೀರಿಗೆ ಬರ!
ಮಂಗಳೂರು : ಸಮುದ್ರದ ಊರಿನವರಿಗೂ ನೀರಿಗೆ ಬರ! ಹೌದು, ನೀರಿನ ಕೊರತೆಯಿಂದಾಗಿ ಮಂಗಳೂರಿನ ಶಾಲಾಕಾಲೇಜು, ಹಾಸ್ಟೆಲ್ಗಳಿಗೆ ಬುಧವಾರದಿಂದ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ.
ತುಂಬೆ ವೆಂಟೆಡ್ ಅಣೆಕಟ್ಟೆಗೆ ಹಾನಿಯಾಗಿರುವ ಕಾರಣ, ನಗರದ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಂಡಿದೆ. ಭಾನುವಾರದವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆಯಲಿದೆ. ಸಾರ್ವಜನಿಕರ ಅಗತ್ಯಗಳಿಗಾಗಿ ಟ್ಯಾಂಕರ್ಗಳಲ್ಲಿ, ನೀರು ಪೂರೈಸಲಾಗುತ್ತಿದೆ ಎಂದು ನಗರ ಪಾಲಿಕೆ ಹೇಳಿದೆ.
ನೀರಿನ ಸಮಸ್ಯೆಯಿಂದಾಗಿ ಶಾಲಾಕಾಲೇಜಿಗೆ ರಜೆ ಜೊತೆಗೆ, ನಗರಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಗಿಡಮರಗಳಿಗೆ ನೀರು ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ.
ಅರಬ್ ಪ್ರಾಂತ್ಯಗಳಲ್ಲಿ ಬಾವಿ ಅಥವಾ ಕೆರೆಕಟ್ಟೆಗಳಿಲ್ಲ. ಅಲ್ಲೆಲ್ಲ ಸಿಗುವುದು ಬರೀ ಸಮುದ್ರದ ಉಪ್ಪು ನೀರು ಮಾತ್ರ. ಆದರೆ ಇಂದು ಅರಬ್ನ ಏಳು ರಾಷ್ಟ್ರಗಳು, ತಂಪಾದ ಸಿಹಿನೀರು ಕುಡಿಯಲು ಸಾಧ್ಯವಾಗಿದೆ. ಕಾರಣ - ದುಬೈ, ಶಾರ್ಜಾ, ಬಹರೇನ್ ಮುಂತಾದ ನಗರಗಳಲ್ಲಿ ಡೀಸಾಲೈನೇಷನ್ ಘಟಕಗಳನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಇಂತಹ ಘಟಕವೊಂದನ್ನು ಯಾಕೆ ಸ್ಥಾಪಿಸಬಾರದು?
(ದಟ್ಸ್ ಕನ್ನಡ ವಾರ್ತೆ)