ದಿನಕರ್ ಮೇಲಿನ ಕೇಸ್ ವಜಾ; ಕೃಷ್ಣಗೆ ಮುಖಭಂಗ!
ಬೆಂಗಳೂರು : ಮಾಜಿ ಡಿಜಿಪಿ ಸಿ. ದಿನಕರ್ ವಿರುದ್ಧ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ ಅವರು ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ನ್ಯಾಯಾಲಯ ತಳ್ಳಿಹಾಕಿದೆ.
ದೆಹಲಿ ನ್ಯಾಯಾಲಯದ ನ್ಯಾಯಾಧೀಶ ಎಸ್. ಎನ್. ಡಿಂಗ್ರ ಅವರು ವಿ.ಜಿ. ಸಿದ್ದಾರ್ಥ ಅವರ ವಕೀಲರು ಮಾಡಿದ ವಾದವನ್ನು ತಳ್ಳಿಹಾಕಿದ್ದಾರೆ. ಸರಿಯಾದ ಕಾರಣಗಳು ಇಲ್ಲದೆ ಮಾನನಷ್ಟವಾಗಿದೆ ಎಂದು ಸುಳ್ಳು ಅರೋಪ ಹೊರಿಸಿದ್ದಕ್ಕಾಗಿ ವಿ.ಜಿ. ಸಿದ್ದಾರ್ಥ ಅವರಿಗೆ ದಂಡ ವಿಧಿಸಿದ್ದಾರೆ. ಸಿದ್ದಾರ್ಥ ಅವರು ದಿನಕರ್ಗೆ 50,000 ರೂ. ಹಾಗೂ ಪುಸ್ತಕ ಪ್ರಕಾಶಕರಿಗೆ 25,000 ರೂ. ನೀಡಬೇಕಾಗಿದೆ.
ಹಿನ್ನೆಲೆ : ನಟ ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಒತ್ತೆಯಾಳಾಗಿ ಇಟ್ಟು ಕೊಂಡಿದ್ದ ಘಟನೆಯನ್ನು ‘ವೀರಪ್ಪನ್: ಪ್ರೆೃಜ್ ಕ್ಯಾಚ್ ರಾಜ್ಕುಮಾರ್’ ಎಂಬ ಪುಸ್ತಕದಲ್ಲಿ ದಿನಕರ್ ದಾಖಲಿಸಿದ್ದರು.
ಆ ಪುಸ್ತಕದಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಅವರ ಅಳಿಯ ಸಿದ್ದಾರ್ಥಸೇರಿದಂತೆ ನಾಡಿನ ಇನ್ನಿತರ ಗಣ್ಯರ ಮೇಲೆ ಅಧಿಕಾರದ ದುರುಪಯೋಗ ಹಾಗೂ ಒತ್ತೆ ಹಣ ನೀಡಿಕೆ ಬಗ್ಗೆ ಶಂಕೆಯನ್ನು ದಿನಕರ್ ವ್ಯಕ್ತಪಡಿಸಿದ್ದರು. 2000ನೇ ಇಸವಿಯಲ್ಲಿ ಬಂದ ಈ ಪುಸ್ತಕ ಸಂಚಲನವನ್ನು ಉಂಟು ಮಾಡಿತ್ತು.
(ಏಜನ್ಸೀಸ್)