ಚಂದ್ರಗುತ್ತಿ ಜಾತ್ರೆಯಲ್ಲಿ ‘ಬೆತ್ತಲೆ ಸೇವೆ’ ನಡೆಯುತ್ತಾ?
ಶಿವಮೊಗ್ಗ : ಚಂದ್ರಗುತ್ತಿ ಜಾತ್ರೆಯಲ್ಲಿ ಬೆತ್ತಲೆಸೇವೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಫೆಬ್ರವರಿ 22ರಿಂದ 27ರವರೆಗೆ ನಿಷೇಧಾಜ್ಞೆ ಜಾರಿಮಾಡಿದೆ.
ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ಪ್ರತಿ ವರ್ಷ ರೇಣುಕಾಂಬಾದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಪ್ರಸ್ತುತ ವರ್ಷದ ಜಾತ್ರೆ ಫೆಬ್ರವರಿ 22ರಿಂದ 27ರವರೆಗೆ ನಡೆಯಲಿದ್ದು, ರಾಜ್ಯದ ಮೂಲೆಮೂಲೆಗಳಿಂದ ಜನ ಆಗಮಿಸಲಿದ್ದಾರೆ.
ದೇವಸ್ಥಾನದ ಆಡಳಿತಾಧಿಕಾರಿ ಜಾತ್ರೆಗೆ ನಿಷೇಧ ಹೇರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಪರಿಶೀಲಿಸಿ ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಅನಿಲ್ಕುಮಾರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಗರ್ಭಗುಡಿಯಲ್ಲಿ ನಡೆಯುವ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧಾಜ್ಞೆಯಿಂದ ವಿನಾಯ್ತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬೆತ್ತಲೆಸೇವೆ-ನಿಷೇಧ... ಏನಿದು? :
ಅನೇಕ ವರ್ಷಗಳಿಂದ ಜಾತ್ರಾ ಸಂದರ್ಭದಲ್ಲಿ ಇಲ್ಲಿ ಬೆತ್ತಲೆಸೇವೆ ನಡೆದುಕೊಂಡು ಬರುತ್ತಿತ್ತು. 1986ರಲ್ಲಿ ಇದನ್ನು ತಡೆಯುವ ಯತ್ನ ನಡೆದಾಗ ಹಿಂಸಾಚಾರ ಸಂಭವಿಸಿತ್ತು. ಆನಂತರ ಚೆನ್ನವೀರಪ್ಪ ಆಯೋಗ ಘಟನೆ ಬಗ್ಗೆ ತನಿಖೆ ನಡೆಸಿ, ಬೆತ್ತಲೆಸೇವೆ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾತ್ರೆಗೆ ನಿಷೇಧ ಹೇರುವಂತೆ ಶಿಫಾರಸು ಮಾಡಿತ್ತು.
ಈ ಶಿಫಾರಸಿನ ಮೇರೆಗೆ ಜಿಲ್ಲಾಡಳಿತ 1987ರಿಂದ ಜಾತ್ರೆಗೆ ನಿಷೇಧ ಹೇರಿದೆ.
(ದಟ್ಸ್ ಕನ್ನಡ ವಾರ್ತೆ)