ಶಿರಾಡಿಘಾಟ್ನಲ್ಲಿ ನಾಪತ್ತೆಯಾಗಿದ್ದವರ ಶವಗಳು ಸಿಕ್ಕಿವೆ!
ಸಕಲೇಶಪುರ : ಜೂನ್ 2006ರಲ್ಲಿ ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಮೂವರ ಪೈಕಿ, ಇಬ್ಬರ ಶವಗಳು ಈಗ ಪತ್ತೆಯಾಗಿವೆ.
ಸಕಲೇಶಪುರದ ವಿಧಾನಸಭಾ ಸದಸ್ಯ ವಿಶ್ವನಾಥ್ ಅವರ ತಮ್ಮ ವಿಕ್ರಮ್ ಹಾಗೂ ಅವರ ಗೆಳೆಯರು, ಕಾಡುಮನೆ ಹಾಗೂ ನಡುಬೆಟ್ಟ ಅರಣ್ಯಪ್ರದೇಶದಲ್ಲಿ ಚಾರಣ ಮಾಡುವಾಗ ಈ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಸಕಲೇಶಪುರದಿಂದ 8 ಕಿ. ಮೀ ದೂರದ ಶಿರಾಢಿ ಘಾಟ್ಗೆ ಸೇರಿದ ಈ ಅರಣ್ಯದಲ್ಲಿ ಸಿಕ್ಕಿರುವ ಕಳೇಬರಗಳಲ್ಲಿ ಒಂದಕ್ಕೆ ತಲೆಬುರುಡೆ ಇಲ್ಲ.
ಶವಗಳ ಬಳಿ ಕರ್ನಾಟಕ ಬ್ಯಾಂಕ್ನ ಎಟಿಎಂ ಕಾರ್ಡ್, ವಸಂತ್ ಕುಮಾರ್ ಅವರ ವಾಹನ ಚಾಲನೆ ಪರವಾನಿಗೆ ಪತ್ರ ಲೆದರ್ ಬೆಲ್ಟ್ ಹಾಗೂ ಶೂಗಳು ಸಿಕ್ಕಿದೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಇನ್ನೊಂದು ಚಾರಣಿಗರ ತಂಡ ಸ್ಥಳಕ್ಕೆ ಮಂಗಳವಾರ(ಫೆ.20)ದಂದು ಭೇಟಿ ನೀಡಲಿದೆ ಎಂದು ಹಾಸನ ಜಿಲ್ಲಾ ಎಸ್ಪಿ ಪಾಂಡುರಂಗ ರಾಣೆ ಹೇಳಿದ್ದಾರೆ.
ನಾಪತ್ತೆಯ ಹಿನ್ನೆಲೆ :
ಬೆಂಗಳೂರಿನ ವಸಂತ್ ಕುಮಾರ್, ಭಾಸ್ಕರ್ ಬಾಬು ಮತ್ತು ತೇಜುಮೂರ್ತಿ ಎಂಬ ಮೂವರು ಇಂಜೀನಿಯರ್ಗಳು ಬೆಂಗಳೂರು ಅಡ್ವೆಂಚರ್ ಕ್ಲಬ್ ಮೂಲಕ ಸಕಲೇಶಪುರ ಅರಣ್ಯಕ್ಕೆ ಹೋಗಿದ್ದರು.
ಜೂನ್ 1, 2006ರಂದು ಮಾರನಹಳ್ಳಿ ಬಳಿಯ ಚೌಡೇಶ್ವರಿ ದೇವಸ್ಥಾನದ ಬಳಿ ವಾಹನವನ್ನು ನಿಲ್ಲಿಸಿ, ಅರಣ್ಯವನ್ನು ಹೊಕ್ಕರು. ನಂತರ ಅವರು ವಾಪಸ್ ಮರಳಿರಲಿಲ್ಲ.
ಶಿರಾಡಿಘಾಟ್ನಲ್ಲಿ ಸಾವಿನ ಸರಪಣಿ :
ಚಾರಣಿಗರ ಸ್ವರ್ಗವಾದ ಶಿರಾಡಿಘಾಟ್ಗೆ ಹೀಗೂ ಒಂದು ಮುಖವಿದೆ. ಕೊಲೆ ಮಾಡಿ ಹೆಣ ಬಿಸಾಕುವುದಕ್ಕೆ ಶಿರಾಡಿಘಾಟ್ ಹೇಳಿ ಮಾಡಿಸಿದ ಜಾಗ! ಇದಕ್ಕೆ ಉದಾಹರಣೆಯಾಗಿ, ಈ ಪ್ರದೇಶದಲ್ಲಿಯೇ ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೂಡ ಕಣ್ಮರೆಯಾಗಿ, ನಂತರ ಕೊಲೆಯಾದ ಘಟನೆ ನಮ್ಮ ಮುಂದಿದೆ.
1988ರಲ್ಲಿ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಇದೇ ಅರಣ್ಯ ಪ್ರದೇಶದಲ್ಲಿ ಕಣ್ಮರೆಯಾಗಿತ್ತು. ಭೂ ಸೇನೆ ಹಾಗೂ ಅರಣ್ಯ ಇಲಾಖೆಯ ಹುಡುಕುವ ಪ್ರಯತ್ನ ಸಫಲವಾಗಿರಲಿಲ್ಲ.
(ದಟ್ಸ್ ಕನ್ನಡ ವಾರ್ತೆ)