ಗೋಪಾಲ ಕೃಷ್ಣ ಅಡಿಗರ 90ನೇ ಹುಟ್ಟುಹಬ್ಬ ಆಚರಣೆ
ಬೆಂಗಳೂರು : ನವ್ಯಕಾವ್ಯದ ಹರಿಕಾರ, ದಿವಂಗತ ಎಂ.ಗೋಪಾಲ ಕೃಷ್ಣ ಅಡಿಗರ 90ನೇ ಹುಟ್ಟು ಹಬ್ಬವನ್ನು ಸುಚಿತ್ರಾ ಕಲಾಕೇಂದ್ರದಲ್ಲಿ ಭಾನುವಾರ(ಪೆ.18) ಆಚರಿಸಲಾಯಿತು.
ಅಡಿಗರ ನೆನಪಿನ ಸಂಚಿಕೆ ‘ಹಣತೆ’ಯನ್ನು ಬಿಡುಗಡೆ ಮಾಡಿದ ಕವಿ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ, ಬೇಂದ್ರೆಯವರು ಒಪ್ಪಿದ ನಂತರವೂ ಅಡಿಗರು ಒಪ್ಪದಿದ್ದರೆ ನಮಗೆ ಸಮಾಧಾನ ಆಗುತ್ತಿರಲಿಲ್ಲ. ನನ್ನ ‘ಹೇಳತೀನಿ ಕೇಳ’ ಕವನ ಓದಿ ಅವರು ಮೆಚ್ಚುಗೆ ಸೂಚಿಸಿದ ಮೇಲೆ ನನಗೆ ನಾನು ಕವನ ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿತು ಎಂದು ನೆನಪಿಸಿಕೊಂಡರು.
ಸಾಹಿತಿ ಯು.ಆರ್.ಅನಂತಮೂರ್ತಿ ಮಾತನಾಡಿ, ತನ್ನನ್ನೇ ತಾನು ನಿರಾಕರಿಸಿದ ಕವಿಯಾಬ್ಬ ಇದ್ದರೆ ಅದು ಅಡಿಗರು ಮಾತ್ರ. ಅಡಿಗ ಒಬ್ಬ ಪ್ರವರ್ತಕರು ಎಂದು ಅಭಿಪ್ರಾಯಪಟ್ಟರು.
ಭದ್ರಪ್ಪ ಗೌಡ ಹಾಗೂ ಭಾರತೀದೇವಿ ಅಡಿಗರ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದರು. ಸಮಾರಂಭದಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ, ಕವಿ ಲಕ್ಷ್ಮೀನಾರಾಯಣ ಭಟ್ಟ, ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕಿ.ರಂ.ನಾಗರಾಜ, ಚಿರಂಜೀವಿ ಸಿಂಗ್, ಸಿ.ಆರ್.ಸಿಂಹ, ಎಸ್.ದಿವಾಕರ್, ಪ್ರತಿಭಾ ನಂದಕುಮಾರ್, ಎಸ್.ಆರ್.ವಿಜಯಶಂಕರ್, ಟಿ.ಜಿ. ರಾಘವ, ರಘುನಾಥ.ಚ.ಹ, ಬಿ.ಎಸ್.ವಿದ್ಯಾರಣ್ಯ ಸೇರಿಂದಂತೆ ಹಲವಾರು ಹಿರಿಯ-ಕಿರಿಯ ಲೇಖಕರು, ಅಭಿಮಾನಿಗಳು ಭಾಗವಹಿಸಿದ್ದರು.
ಈ ಕಾವ್ಯ ನಮನ ಕಾರ್ಯಕ್ರಮವನ್ನು ಶಿವರಾಮ ಕಾರಂತ ವೇದಿಕೆ ಮತ್ತು ಗೋಪಾಲ ಕೃಷ್ಣ ಅಡಿಗ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದವು.
(ದಟ್ಸ್ ಕನ್ನಡ ವಾರ್ತೆ)