ಪ್ರಜಾವಾಣಿ-ಡೆಕ್ಕನ್ಹೆರಾಲ್ಡ್ಗೆ ಅದೇ ಹೊಸ ನಾಯಕತ್ವ!
ಟೈಮ್ಸ್ ಮತ್ತು ವಿಜಯಕರ್ನಾಟಕ ಪತ್ರಿಕೆಯ ಬೇಸಗೆ ಬಿಸಿಗೆ ಬೆಚ್ಚಿದ ಪಿಂಟರ್ಸ್ ಮೈಸೂರು ಪ್ರೆೃವೇಟ್ ಲಿಮಿಟೆಡ್, ಏನ್ ಮಾಡಿದೆ ಗೊತ್ತೆ?
ಬೆಂಗಳೂರು : ಡೆಕ್ಕನ್ ಹೆರಾಲ್ಡ್ , ಪ್ರಜಾವಾಣಿ, ಸುಧಾ , ಮಯೂರ ಪತ್ರಿಕಾ ಸಮೂಹದ ಕೆ.ಎನ್. ಶಾಂತಕುಮಾರ್, ಸಂಪಾದಕರಾಗಿ ಇನ್ನಿಲ್ಲ!
ಇಂಥದೊಂದು ಸುದ್ದಿ ಪತಾಕೆ ಬುಧವಾರ ರಾತ್ರಿಯವರೆಗೆ ಕರ್ನಾಟಕದ ಸುದ್ದಿಗಾರರ ವಲಯಗಳಲ್ಲಿ, ಎಸ್ಎಂಎಸ್ ಜೋಕುಗಳಿಗಿಂತ ವೇಗವಾಗಿ ಹರಡುತ್ತಿತ್ತು. ನಿಜ. ಶಾಂತಕುಮಾರ್ ಒಳ್ಳೆ ಮನುಷ್ಯ ಅದಕ್ಕಿಂತ ಹೆಚ್ಚಾಗಿ ಸ್ನೇಹಶೀಲ. ಪರಂಪರಾಗತ ಧೋರಣೆ ಮತ್ತು ಶೈಲಿಗಳಲ್ಲಿ ಹೂತುಹೋಗಿದ್ದ ಪತ್ರಿಕೆಗೆ ಹೊಸ ಮುಖ, ಹೊಸ ತೇಜಸ್ಸು , ಹೊಸ ವಿನ್ಯಾಸ ನೀಡಿದ ಉದ್ಯಮಶೀಲ.
ಶಾಂತಕುಮಾರ್ ಬರಹಗಾರರಾಗಿ ಅಥವಾ ಪತ್ರಕರ್ತರಾಗಿ ಹೆಸರು ಮಾಡಿದವರಲ್ಲ. ಅವರದ್ದೇನಿದ್ದರೂ ಕ್ಯಾಮೆರಾ ಕೈಚಳಕ. ಆದರೂ, ಪತ್ರಿಕೆಯ ಸಂಪಾದಕ ಜವಾಬ್ದಾರಿ ಹೊತ್ತುಕೊಂಡ ನಂತರ ಮೊದಲು ಮಾಡಿದ ಕೆಲಸವೆಂದರೆ, ಆಡಳಿತ-ನೌಕರರ ನಡುವೆ ಆವರಿಸಿಕೊಂಡಿದ್ದ ಅಸ್ಪೃಷ್ಯ ಮನೋಭಾವವನ್ನು ಕಿತ್ತೊಗೆದದ್ದು. ಪತ್ರಿಕೆಯು ಎಲ್ಲ ಜಾತಿ, ವರ್ಗಗಳಿಗೆ ತಲುಪುವಂತೆ ಮಾಡದಿದ್ದರೆ ಜನ ಏನಂದುಕೊಳ್ಳುತ್ತಾರೆನ್ನುವುದನ್ನು ಅರ್ಥಮಾಡಿಕೊಂಡದ್ದು.
ಶಾಂತಕುಮಾರ್ ಬಗ್ಗೆ ಇನ್ನೊಂದು ವಿಚಾರವೆಂದರೆ, ರೆವಿನ್ಯೂ ಸೈಟಿನಂತಿದ್ದ ಪ್ರಜಾವಾಣಿ ವೆಬ್ಸೈಟ್ನ್ನು ಬಿಡಿಎ ಸೈಟಾಗಿ ಮಾರ್ಪಡಿಸಿದ್ದು.
ಎಲ್ಲರೊಡನೆ ಪ್ರೀತಿಯ ಒಡನಾಟ, ನೌಕರರ ಅಭಿಪ್ರಾಯಗಳಿಗೂ ಮನ್ನಣೆ ಕೊಡುವ, ಉತ್ತಮ ಕೆಲಸಗಾರರನ್ನು ಗುರುತಿಸಿ ಬೆನ್ನುತಟ್ಟುವ, ಆ ಮೂಲಕ ಪತ್ರಿಕೆಗೆ ಸಮಗ್ರತೆಯ ಚೌಕಟ್ಟು ನಿರ್ಮಿಸುವ ಉದಾರ ಮನೋಭಾವ. ಆದರೂ ಅವರಿಲ್ಲ!
ಯಾಕಂತೆ ಅಂದರೆ, ‘ಪ್ರಜಾವಾಣಿ’ ಪತ್ರಿಕೆಗೆ ತೀವ್ರ ಪೈಪೋಟಿ ಕೊಟ್ಟಿದ್ದು ‘ವಿಜಯ ಕರ್ನಾಟಕ’. ‘ಟೈಮ್ಸ್ ಆಫ್ ಇಂಡಿಯಾ’ದವರು ವಿಜಯಕರ್ನಾಟಕ ಮತ್ತು ವಿಜಯ ಟೈಮ್ಸ್ ಖರೀದಿಸಿದ ನಂತರ ಪೈಪೋಟಿ ಇನ್ನಷ್ಟು ಕಠಿಣವಾಗಿ ಅದನ್ನು ನಿಭಾಯಿಸುವಲ್ಲಿ ಶಾಂತಕುಮಾರ್ ಸೋತುಹೋದರಂತೆ! ಅದಕ್ಕೇ ಅಂತೆ, ಅವರನ್ನು ಅಲ್ಲಿಂದ ಎಬ್ಬಿಸಿ ಈಗ ಅವರ ಅಣ್ಣನೂ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅಳಿಯಂದಿರೂ ಆಗಿರುವ ಹಳೆಹುಲಿ ಕೆ.ಎನ್. ತಿಲಕ್ಕುಮಾರ್ ಅವರನ್ನು ಫೆ. 15ರಿಂದ ಸಂಪಾದಕರ ಕುರ್ಚಿಯಲ್ಲಿ ಮತ್ತೆ ಪೀಠಪ್ರತಿಷ್ಠಾಪನೆ ಮಾಡಲಾಗಿದೆಯಂತೆ. ಅಂತೂ ನಂದಿಬ್ರಾಂಡ್ ಪತ್ರಿಕೆಯಲ್ಲಿ ಶಿವರಾತ್ರಿ ಸಮೀಪಿಸುತ್ತಿದ್ದಂತೆಯೇ ಬದಲಾವಣೆ ಗಾಳಿ ಬೀಸಿದೆ.
ಈ ಬೆಳವಣಿಗೆಯಿಂದಾಗಿ ಪತ್ರಿಕೋದ್ಯಮ ವಲಯಗಳಲ್ಲದೆ, ‘ಟೈಮ್ಸ್ ಆಫ್ ಇಂಡಿಯಾ’(?) ಆಡಳಿತ ವರ್ಗವೂ ಚಕಿತಗೊಂಡಿದೆಯಂತೆ.
(ದಟ್ಸ್ ಕನ್ನಡ ವಾರ್ತೆ)