ಐಸಿಸಿಗೆ ವರದಿ: ಸ್ಯಾಮ್ಯುಯೆಲ್ಸ್ ಪ್ರಕರಣದ ತನಿಖೆ ಶುರು
ನವದೆಹಲಿ : ಮ್ಯಾಚ್ ಫಿಕ್ಸಿಂಗ್ ಪ್ರಕರಣವೊಂದರಲ್ಲಿ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲಾನ್ ಸ್ಯಾಮ್ಯುಯಲ್ಸ್ ಬುಕಿಯಾಬ್ಬನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ನಾಗಪುರ ಪೊಲೀಸರ ವರದಿ ಐಸಿಸಿ ಕೈಸೇರಿದೆ.
ಈ ಬಗ್ಗೆ ಬಿಸಿಸಿಐ(ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾಗಪುರ ಪೊಲೀಸರ ವರದಿ ಇಂದು ನಮಗೆ ತಲುಪಿದೆ. ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವರದಿಯನ್ನು ಐಸಿಸಿ(ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ)ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಭೂಗತ ದೊರೆ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿರುವ ಬುಕಿ ಮುಕೇಶ್ ಕೊಚಾರ್ನೊಂದಿಗೆ, ಸ್ಯಾಮ್ಯುಯೆಲ್ಸ್ ಸಂಪರ್ಕದ ಕುರಿತು ಅಗತ್ಯ ಮಾಹಿತಿ ಪಡೆಯಲು, ಭಾರತದಲ್ಲಿರುವ ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕದ ಪ್ರತಿನಿಧಿಗಳು ನಾಗಪುರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿವರಿಸಿದರು.
ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕದ ಪ್ರತಿನಿಧಿಗಳೊಂದಿಗೆ ಈ ಕುರಿತು ಈಗಾಗಲೇ ಮಾತಾಡಿದ್ದೇನೆ. ವಿದೇಶಿ ಆಟಗಾರ ಇದರಲ್ಲಿ ಭಾಗಿಯಾಗಿರುವ ಕಾರಣ ಪ್ರಕರಣವನ್ನು ಸೂಕ್ಷ್ಮವಾಗಿ ಹಾಗೂ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ. ತನಿಖೆಗೆ ಬಿಸಿಸಿಐ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಅವರನ್ನು ಸಂಪರ್ಕಿಸಿದಾಗ, ಭಾರತೀಯ ಆಟಗಾರ ಇದರಲ್ಲಿ ಭಾಗಿಯಾಗಿದ್ದರೆ ನಾವು ಕ್ರಮ ಕೈಗೊಳ್ಳಬಹುದಿತ್ತು. ಯಾವುದೇ ಭಾರತೀಯ ಆಟಗಾರ ಭಾಗಿಯಾಗಿಲ್ಲವಾದ್ದರಿಂದ ಐಸಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಐಸಿಸಿ ಪ್ರತಿಕ್ರಿಯೆ : ನಾಗಪುರ ಪೊಲೀಸರು ನೀಡಿರುವ ವರದಿ ತನಗೆ ತಲುಪಿದೆ ಎಂದು ಈ ಮಧ್ಯೆ ಐಸಿಸಿ ಖಾತರಿಪಡಿಸಿದ್ದು, ಪ್ರಕರಣದ ಕುರಿತು ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದೆ.
(ಏಜನ್ಸೀಸ್)