ಕಾವೇರಿ : 1, 2, 3, 4, ... ಆಮೇಲಿನ್ನೇನು? ಈಗ ಮುಂದೇನು?
ಕರ್ನಾಟಕಕ್ಕೆ
ಅನ್ಯಾಯವೆಸಗುವ,
ತಮಿಳುನಾಡಿಗೆ
ಅನುಕೂಲವಾಗುವ
ಘಟನೆಗಳು
ಎಷ್ಟೊಂದು
ತ್ವರಿತಗತಿಯಲ್ಲಿ
ಜರುಗಿವೆ
ನೋಡಿ!
-ಇದೆಲ್ಲ
ಹೇಗಾಯಿತು?
ಈಗ
ನಾವೇನು
ಮಾಡಬೇಕು?
ಲೇಖನ
ಓದಿ...
- ಪ್ರೇಮಶೇಖರ, ಪಾಂಡಿಚೇರಿ
ಈ ಹದಿನಾರು ವರ್ಷಗಳಲ್ಲಿ ಆಯೋಗಕ್ಕೆ ಸ್ವಲ್ಪವಾದರೂ ವಿವೇಕ ಮೂಡುತ್ತದೆ ಹಾಗೂ ತಾನು ಆತುರದಲ್ಲಿ ನೀಡಿದ ಮಧ್ಯಂತರ ನಿರ್ಣಯದಂತಹ ತಪ್ಪನ್ನು ಮತ್ತೆ ಮಾಡಲಾರದು ಎಂಬ ನಿರೀಕ್ಷೆ ಸುಳ್ಳಾಗಿದೆ.
ಹಿಂದಿನ ಕತೆ!
ತಮಿಳುನಾಡಿನ 15.24 ಲಕ್ಷ ಏಕರೆ ಪ್ರದೇಶದ ಬೇಸಾಯಕ್ಕೆ ಕೇವಲ 242 ಟಿಎಂಸಿ ನೀರು ಸಾಕು ಎಂದು 1921ರ ಕರ್ನಲ್ ಎಲ್ಲಿಸ್ ವರದಿ ಹೇಳಿತ್ತು. ಸಾಂಬಾ ಬೆಳೆಯ ಮೂರನೇ ಎರಡರಷ್ಟು ಅಗತ್ಯವನ್ನು ಹಿಂಗಾರು ಮಳೆಯೇ ಪೂರೈಸುತ್ತದೆ ಎಂಬ ಮಹತ್ವದ ವಿವರವನ್ನು ಆ ವರದಿ ಹೇಳಿತ್ತು. ತಾನೇ ನೇಮಿಸಿದ್ದ ಕರ್ನಲ್ ಎಲ್ಲಿಸ್ ಆಯೋಗದ ಈ ತೀರ್ಮಾನವನ್ನು ಮದರಾಸು ಸರಕಾರ ಧಿಕ್ಕರಿಸಿ 1924ರಲ್ಲಿ ಮೈಸೂರು ಸಂಸ್ಥಾನದ ಮೇಲೆ ಒಪ್ಪಂದವೊಂದನ್ನು ಹೇರಿತು.
ಬ್ರಿಟಿಷ್ ಸಾಮ್ರಾಜ್ಯಶಾಹಿಯ ನೇರ ಆಡಳಿತದಲ್ಲಿದ್ದ ಮದರಾಸು ದುರ್ಬಲ ದೇಶೀಯ ಸಂಸ್ಥಾನವಾದ ಮೈಸೂರಿನ ಮೇಲೆ ಹೇರಿದ ಈ ಅನ್ಯಾಯದ ಒಪ್ಪಂದದ ಪ್ರಕಾರ ಮೈಸೂರು ವರ್ಷವೊಂದಕ್ಕೆ 380 ಟಿಎಂಸಿ ನೀರನ್ನು ಮದರಾಸಿಗೆ (ತಮಿಳುನಾಡಿಗೆ) ಬಿಡಬೇಕಾಗಿತ್ತು! ಮೈಸೂರು ಈ ಒಪ್ಪಂದವನ್ನು 1974ರವರೆಗೆ ಸರಿಯಾಗಿ ಪಾಲಿಸಿ ಅಷ್ಟು ನೀರನ್ನು ತಮಿಳುನಾಡಿಗೆ ಬಿಡುತ್ತಿತ್ತು! ಐವತ್ತು ವರ್ಷಗಳ ನಂತರ ನೀರು ಹಂಚಿಕೆಯ ಪರಿಮಾಣವನ್ನು ಪರಿಶೀಲಿಸಬೇಕೆಂದು ಆ ಒಪ್ಪಂದವೇ ಹೇಳಿದ್ದುದರಿಂದ ಕರ್ನಾಟಕ ಅದನ್ನೇ ಪಟ್ಟಾಗಿ ಹಿಡಿದು ಮರುಪರಿಶೀಲನೆಗೆ ಒತ್ತಾಯ ಹಾಕಿತು.
ಅಲ್ಲಿಯವರೆಗೆ ಸಾಕಷ್ಟು ನೀರು ಕುಡಿದು ಕೊಬ್ಬಿದ್ದ ತಮಿಳುನಾಡಿಗೆ ಮುಂದೆ ತನ್ನ ಪಾಲಿನ ನೀರು ಕಡಿಮೆಯಾಗಬಹುದೆಂಬ ಭಯ ಹತ್ತಿ ಮರುಪರಿಶೀಲನೆಯನ್ನು ತಡೆಗಟ್ಟುವ ಎಲ್ಲ ದೊಂಬರಾಟವನ್ನೂ ಅದು ಆಡಿತು. ನೇರ ಮಾತುಕತೆ ನಡೆದರೆ ತನ್ನ ಸುಳ್ಳುಗಳ ಬೇಳೆ ಬೇಯುವುದಿಲ್ಲವೆಂದರಿತ ತಮಿಳುನಾಡು ಟ್ರಿಬ್ಯೂನಲ್ ಸ್ಥಾಪನೆಗೆ ಒತ್ತಾಯ ಹಾಕಿತು. ಅದರ ಒತ್ತಾಯ ಈಡೇರಿ 1990ರಲ್ಲಿ ಟ್ರಿಬ್ಯೂನಲ್ ರಚನೆಯೂ ಆಯಿತು. ಒಂದೇವರ್ಷದಲ್ಲಿ ಅದು ತನ್ನ ಮಧ್ಯಂತರ ತೀರ್ಪನ್ನೂ ನೀಡಿಬಿಟ್ಟಿತು. ಆರು ತಿಂಗಳ ಒಳಗೇ ಕೇಂದ್ರ ಸರಕಾರ ಆ ಅನ್ಯಾಯದ ತೀರ್ಪನ್ನು ಗೆಜೆಟ್ನಲ್ಲೂ ಹಾಕಿಬಿಟ್ಟಿತು.
ರಾಜಕೀಯದ ಕತೆ!
ಕರ್ನಾಟಕಕ್ಕೆ ಅನ್ಯಾಯವೆಸಗುವ, ತಮಿಳುನಾಡಿಗೆ ಅನುಕೂಲವಾಗುವ ಘಟನೆಗಳು ಎಷ್ಟೋಂದು ತ್ವರಿತಗತಿಯಲ್ಲಿ ಜರುಗಿವೆ ನೋಡಿ!
ಇದೆಲ್ಲ ಹೇಗಾಯಿತು? ಉತ್ತರ- ತಮಿಳರ ಒಗ್ಗಟ್ಟು!
ಲೋಕಸಭಾ ಚುನಾವಣೆಗಳಲ್ಲಿ ತಮಿಳುನಾಡಿನ ಜನತೆ ಸಾಮಾನ್ಯವಾಗಿ ಯಾವುದಾದರೊಂದು ಪಕ್ಷವನ್ನು ಪೂರ್ಣವಾಗಿ ಬೆಂಬಲಿಸುತ್ತದೆ. ಹೀಗಾಗಿ ಯಾವಾಗಲೂ ಅಣ್ಣಾ ಡಿಎಂಕೆ ಅಥವಾ ತಮ್ಮಾ ಡಿಎಂಕೆಯ ಮೂವತ್ತು ಮೂವತ್ತೈದು ಎಂಪಿಗಳು ಲೋಕಸಭೆಯಲ್ಲಿ ತಮಿಳುನಾಡನ್ನು ಪ್ರತಿನಿಧಿಸುತ್ತಾರೆ ಹಾಗೂ ತಮ್ಮ ರಾಜ್ಯದ ಹಿತಾಸಕ್ತಿಗಾಗಿ ಒಟ್ಟಾಗಿ ಬಡಿದಾಡುತ್ತಾರೆ.
ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದಲ್ಲಿ ಸ್ಥಾಪನೆಯಾದ ಪ್ರತಿಯಾಂದು ಸರಕಾರದಲ್ಲೂ ತಮಿಳುನಾಡಿನ ಪಕ್ಷಗಳು (ಮುಖ್ಯವಾಗಿ ಡಿಎಂಕೆ) ಪ್ರಮುಖ ಪಾತ್ರ ವಹಿಸುತ್ತಿವೆ ಹಾಗೂ ತಮ್ಮ ಸಂಖ್ಯಾಬಲದಿಂದ ಹೆಚ್ಚು ಸಚಿವ ಸ್ಥಾನಗಳನ್ನು ಪಡೆದುಕೊಳ್ಳುತ್ತಿವೆ ಮತ್ತು ಕೇಂದ್ರ ಸರಕಾರವನ್ನು ತಮ್ಮಿಚ್ಚೆಯಂತೆ ಕುಣಿಸುತ್ತಿವೆ.