ಸರ್ವಪಕ್ಷ ಸಭೆ ಬುಧವಾರಕ್ಕೆ ಮುಂದೂಡಿಕೆ -ಪ್ರಕಾಶ್
ಬೆಂಗಳೂರು : ಶಾಸಕ ಯು.ಟಿ.ಫರೀದ್ ನಿಧನಗೊಂಡ ಹಿನ್ನೆಲೆಯಲ್ಲಿ ಸರ್ವ ಪಕ್ಷ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಗೃಹಸಚಿವ ಎಂ.ಪಿ.ಪ್ರಕಾಶ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶಾಸಕ ಫರೀದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿರೋಧ ಪಕ್ಷದ ನಾಯಕ ಧರ್ಮಸಿಂಗ್ ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರು ಉಳ್ಳಾಲಕ್ಕೆ ತೆರಳಲಿದ್ದಾರೆ. ಹಾಗಾಗಿ ಸರ್ಕಾರ ಸರ್ವ ಪಕ್ಷ ಸಭೆಯನ್ನು ಮುಂದೂಡಿದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶದ ಸಂಪೂರ್ಣ ಮಾಹಿತಿಗಾಗಿ ಸರ್ಕಾರ ಎದುರು ನೋಡುತ್ತಿದೆ. ಅದನ್ನು ಪರಿಶೀಲಿಸಲು ಇನ್ನೂ ಸ್ವಲ್ಪ ಸಮಯದ ಅಗತ್ಯವಿದೆ ಎಂದು ಅವರು ತಿಳಿಸಿದರು.
ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ಫೆ.8ರ ಕರ್ನಾಟಕ ಬಂದ್ ಕರೆಯನ್ನು ವಾಪಸ್ಸು ಪಡೆಯಬೇಕು. ಏರ್ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ದೇಶ ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಈ ಸಮಯದಲ್ಲಿ ಬಂದ್ ಬೇಡ ಎಂದು ಎಂ.ಪಿ.ಪ್ರಕಾಶ್ ಅಭಿಪ್ರಾಯ ಪಟ್ಟರು.
(ಯುಎನ್ಐ)