ಗುಲ್ಮೊಹರ್ : ಯವನಿಕಾದಲ್ಲಿ ನಿಸಾರ್ ಕಾವ್ಯೋತ್ಸವ!
ಬೆಂಗಳೂರು : ಯವನಿಕಾದಲ್ಲಿ ನಡೆದ ‘ನಾದಲೀಲೆ’ಯ ಗುಂಗು ಸಾಹಿತ್ಯಾಭಿಮಾನಿಗಳಲ್ಲಿದೆ. ಬೇಂದ್ರೆ ಪದ್ಯ ಕೇಳುವ ಸುಖ ಕೊಟ್ಟ ಈ ಜಾಗದಲ್ಲಿ , ಭಾನುವಾರ(ಫೆ.11) ನಿಸಾರ್ ಕಾವ್ಯೋತ್ಸವ.
ನೃಪತುಂಗ ರಸ್ತೆಯ ಯವನಿಕಾದಲ್ಲಿ ಅಂದು ಬೆಳಗ್ಗೆ 10ಕ್ಕೆ ‘ಗುಲ್ಮೊಹರ್’ ಹೆಸರಿನಲ್ಲಿ ನಿಸಾರ್ ಕಾವ್ಯೋತ್ಸವ. ಇಲ್ಲಿ ಕಾವ್ಯವನ್ನು ಓದುವ ರಸಿಕರ ಪಟ್ಟಿಯೇ ವರ್ಣಮಯ! ವಸುಂಧರಾದಾಸ್ ಎಂಬ ಬೆಡಗಿ, ಉಮಾಶ್ರೀ ಎಂಬ ಹಿರಿಯ ಕಲಾವಿದೆ, ಕಲ್ಯಾಣ್ ಎಂಬ ಪ್ರೇಮಕವಿ ಪದ್ಯಓದುವವರ ಸಾಲಿನಲ್ಲಿದ್ದಾರೆ.
ನಿತ್ಯೋತ್ಸವದ ಕವಿಗೆ ಅರ್ಥಪೂರ್ಣವಾಗಿ ಕಾವ್ಯನಮನ ಸಲ್ಲಿಸುವ ಮೂಲಕ ‘ರಸಿಕ ಕೇಳೊ ತಂಡ’ ತನ್ನ ಚಟುವಟಿಕೆಯನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಅಕ್ಷರ ಕಾವ್ಯ, ಪ್ರಾರ್ಥನೆಯೂ ಕಾವ್ಯ, ಮಾತು ಕಾವ್ಯ, ಜೊತೆಗೆ ದೃಶ್ಯಕಾವ್ಯ... ಎಲ್ಲವೂ ಕಾವ್ಯಮಯ... ನಿಸಾರ್ ಪದ್ಯಗಳಿಗೆ ತನ್ನದೇಯಾದ ಆಕರ್ಷಣೆ ಇರುವುದರಿಂದ ಕೇಳುಗರು ಮಾಯವಾಗುವುದಿಲ್ಲ ಎನ್ನುವ ನಂಬಿಕೆ ತಂಡಕ್ಕಿದೆ!
ಅರುಂಧತಿನಾಗ್, ಸಿ.ಆರ್.ಸಿಂಹ, ಜಹಾಂಗೀರ್, ಪ.ಸ.ಕುಮಾರ್, ಅನಂತಕುಮಾರ್, ಮುಖ್ಯಮಂತ್ರಿ ಚಂದ್ರು, ಶಿವರಾಂ, ಎಸ್.ದಿವಾಕರ್, ಕೆ.ಕಲ್ಯಾಣ್, ಕಪ್ಪಣ್ಣ, ಚಂದ್ರನಾಥ ಆಚಾರ್ಯ, ಚಿಂತಾಮಣಿ ಕೊಡ್ಲೆಕೆರೆ, ಕೆ.ಬಿ.ಸಿದ್ಧಯ್ಯ, ಪದ್ಮರಾಜ ದಂಡಾವತಿ, ಲಲಿತಾ ಸಿದ್ಧಬಸವಯ್ಯ, ಡಿ.ವಿ.ಪ್ರಹ್ಲಾದ್, ಪಿ.ಚಂದ್ರಿಕಾ, ಸಚ್ಚಿದಾನಂದ ಹೆಗಡೆ, ಎಸ್.ವಿ.ಉದಯರವಿ, ಎಚ್.ಆರ್.ಸಿದ್ಧಗಂಗಯ್ಯ, ಭಾರತಿದೇವಿ, ಮಹೇಶ್ ಜೋಶಿ, ಗೀತಾ, ಎಂ.ಎಸ್.ರಘುನಾಥ್, ಯತಿ ಸಿದ್ಧಕಟ್ಟೆ ಮತ್ತು ರಾಜಲಕ್ಷ್ಮಿ ಮತ್ತಿತರರು ಕಾವ್ಯ ಓದಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)