ಜಯಾಗೆ ನೀರು ಸಾಲದಂತೆ! ಕರುಣಾನಿಧಿ ಕನ್ನಡಪರವಂತೆ!
ಚೆನ್ನೈ : ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಹೆಚ್ಚುವರಿ ನೀರಿಗಾಗಿ ತಮಿಳುನಾಡು, ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಆದೇಶದಲ್ಲಿ 205ಟಿಎಂಸಿ ನೀರನ್ನು ಬಿಡಲು ನ್ಯಾಯಮಂಡಳಿ ಕರ್ನಾಟಕಕ್ಕೆ ಸೂಚಿಸಿತ್ತು. ಆ ಪ್ರಮಾಣ ಈಗ ಕಡಿಮೆಯಾಗಿದೆ(192ಟಿಎಂಸಿ). ಹೀಗಾಗಿ ಕೂಡಲೇ ತಮಿಳುನಾಡು ಸರ್ಕಾರ, ಸುಪ್ರೀಂಕೋರ್ಟ್ನಲ್ಲಿ ಹಕ್ಕೋತ್ತಾಯ ಮಾಡಬೇಕಾಗಿದೆ ಎಂದರು.
ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಸ್ವಾಗತಿಸಿರುವ ಕರುಣಾನಿಧಿ ಅವರ ವರ್ತನೆ ಸಂದೇಹಾಸ್ಪದವಾಗಿದೆ. ಕರುಣಾನಿಧಿ ಬಳಗದ ಕನ್ನಡ ಚಾನೆಲ್ಗಳು ಕರ್ನಾಟಕದಲ್ಲಿವೆ. ಕರ್ನಾಟಕದ ಪರವಾಗಿ ಮೆದುಧೋರಣೆ ಅನುಸರಿಸುತ್ತಿದ್ದಾರೆ ಅನ್ನಿಸುತ್ತಿದೆ. ರಾಜ್ಯದ ರೈತರ ಹಿತ ಮರೆತಿರುವ ಮುಖ್ಯಮಂತ್ರಿ ಕರುಣಾನಿಧಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಜಯಲಲಿತಾ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿರುವ ತಮಿಳರ ರಕ್ಷಣೆಗೆ ಅರ್ಜಿ : ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ತಮಿಳರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಅವರ ರಕ್ಷಣೆಗಾಗಿ ಚೆನ್ನೈ ಹೈಕೋರ್ಟ್ನಲ್ಲಿ ತಮಿಳು ಪರ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಕೇಂದ್ರ ಸರ್ಕಾರ ತಮಿಳರಿಗೆ ರಕ್ಷಣೆ ನೀಡುವಂತೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಸಂಘಟನೆಗಳು ಕೋರಿವೆ.
(ಯುಎನ್ಐ)