ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾವೇರಿ’ದ ಜಗಳ : 1889ರಿಂದ 2007ರವರೆಗೆ

By Staff
|
Google Oneindia Kannada News

ಕಾವೇರಿ ಜಗಳ ನಡೆದು ಬಂದ ಹಾದಿಯನ್ನು ಇಲ್ಲಿ ದಾಖಲಿಸಲಾಗಿದೆ. ಕರ್ನಾಟಕಕ್ಕೆ ಆದ ಆನ್ಯಾಯ, ತಮಿಳುನಾಡು ಮೇಲುಗೈ ಪಡೆದ ಸಂಗತಿಗಳು, ಕೇಂದ್ರದ ಮಲತಾಯಿ ಧೋರಣೆ ಮತ್ತಿತರ ಸಂಗತಿಗಳು ನಿಮ್ಮ ಮುಂದೆ...

  • 1889ರಲ್ಲಿ ಕಾವೇರಿ ನದಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ಮೈಸೂರು ಸಂಸ್ಥಾನ ಮುಂದಾದಾಗ ಮದ್ರಾಸ್‌ ಸರಕಾರ ಆಕ್ಷೇಪ ಎತ್ತಿತು.
  • ಭಾರತದ ಪ್ರಶ್ನಾತೀತ ಪ್ರಭುತ್ವವನ್ನು ಹೊಂದಿದ್ದ ಬ್ರಿಟಿಷ್‌ ಆಡಳಿತ ತನ್ನ ರಾಜಕೀಯ ಅಧಿಕಾರವನ್ನು ಬಳಸಿ 1992ರಲ್ಲಿ ಮೈಸೂರು ಸಂಸ್ಥಾನವನ್ನು ನಿರ್ಬಂಧಕ್ಕೆ ಒಳಪಡಿಸಿತು.
  • ಈ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನ ಹೊಸ ಯೋಜನೆಗಳನ್ನು ಕೈಗೊಳ್ಳುವಾಗ ಮದ್ರಾಸ್‌ ಸರಕಾರದ ಒಪ್ಪಿಗೆ ಪಡೆಯುವುದು ಕಡ್ಡಾಯ.
  • 1914ರಲ್ಲಿ ಮೈಸೂರು ಸಂಸ್ಥಾನ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾದಾಗ ಮದ್ರಾಸ್‌ ಸರಕಾರ ಅನುಮತಿ ನೀಡಲು ನಿರಾಕರಿಸಿತು.
  • 1892ರ ಒಪ್ಪಂದದಂತೆ ಕೆಆರ್‌ಎಸ್‌ ನಿರ್ಮಾಣ ಮದ್ರಾಸ್‌ ರಾಜ್ಯದ ಹಿತಕ್ಕೆ ಮಾರಕವೇ? ಇಲ್ಲವೇ? ಎಂಬುದನ್ನು ಪರಾಮರ್ಶಿಸಲು ಎಚ್‌.ಡಿ.ಗ್ರಿಫಿನ್‌ ಅವರನ್ನು ಪಂಚಾಯ್ತಿದಾರನಾಗಿ ನೇಮಕ ಮಾಡಲಾಯಿತು.
  • ಕನ್ನಂಬಾಡಿ ಯೋಜನೆ ಸಕ್ರಮವೆಂದು ಗ್ರಿಫಿನ್‌ ಅವರು ಅಭಿಪ್ರಾಯಪಟ್ಟರು.
  • 1892ರ ಒಪ್ಪಂದದ ಪ್ರಕಾರ ಪಂಚಾಯ್ತಿದಾರನ ತೀರ್ಪು ಅಂತಿಮ ಮತ್ತು ಅದನ್ನು ಪ್ರಶ್ನಿಸುವಂತಿಲ್ಲ ಎಂದಿದ್ದರೂ, ಮದ್ರಾಸ್‌ ಸರ್ಕಾರ ತೀರ್ಪನ್ನು ಪ್ರಶ್ನಿಸಿ, ಭಾರತ ಸರಕಾರದ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಿತು.
  • ಮದ್ರಾಸ್‌ ಸರಕಾರದ ಒತ್ತಡಕ್ಕೆ ಮಣಿದು 1892ರ ಹೊಸ ಮಾತುಕತೆಗೆ ಭಾರತ ಸರಕಾರ ಆದೇಶ ನೀಡಿತು.
  • ಈ ಮಾತುಕತೆಯ ಫಲವಾಗಿ 1924ರ ಫೆಬ್ರವರಿಯಲಿ ಹೊಸ ಒಪ್ಪಂದಕ್ಕೆ ಮೈಸೂರು ಮಹಾರಾಜ ಮತ್ತು ಮದ್ರಾಸ್‌ ಗೌರ್ನರ್‌ ಸಹಿ ಹಾಕಿದರು.
  • ಈ ಹೊಸ ಒಪ್ಪಂದ ಮೈಸೂರು ಸಂಸ್ಥಾನದಲ್ಲಿ ನೀರಾವರಿ ಯೋಜನೆಗಳಿಗೆ ಅಡ್ಡಿಯುಂಟುಮಾಡಿತು.
  • ಕನ್ನಂಬಾಡಿ ಕಟ್ಟೆಗೆ ಅನುಮತಿ ನೀಡುವುದರಿಂದ ಹೆಚ್ಚುವರಿ ಭೂಕಂದಾಯ ಸಂದಾಯವಾಗುತ್ತದೆ ಎಂಬ ಅರ್ಥ ರಾಜಕೀಯ ಭಾರತ ಸರ್ಕಾರದ್ದಾಗಿತ್ತು.
  • 1906ರಲ್ಲಿ ಶಿವನ ಸಮುದ್ರದಲ್ಲಿ ಅಮೆರಿಕದ ಕಂಪನಿಯಾಂದು ಜಲವಿದ್ಯುತ್‌ ಸ್ಥಾವರ ಸ್ಥಾಪನೆಗೆ ಮುಂದಾಗಿತ್ತು. ಬ್ರಿಟಿಷ್‌ ಕಂಪನಿ ವಶದಲ್ಲಿದ್ದ ಕೆಜಿಎಫ್‌ನ ಚಿನ್ನದ ಗಣಿಗೆ ಶಿವನ ಸಮುದ್ರದಿಂದ ವಿದ್ಯುತ್‌ ಸರಬರಾಜಾಗುತ್ತಿತ್ತು. ಕನ್ನಂಬಾಡಿ ಕಟ್ಟೆ ಕಟ್ಟುವುದರಿಂದ ಬೇಸಿಗೆಯಲ್ಲಿ ಶಿವನ ಸಮುದ್ರಕ್ಕೆ ನೀರು ಬಿಟ್ಟು ನಿರಂತರ ವಿದ್ಯುತ್‌ ಉತ್ಪಾದಿಸಬಹುದಿತ್ತು. ಈ ಆರ್ಥಿಕ ಲಾಭ ಮತ್ತು ಲಾಭಿಯ ಕಾರಣಕ್ಕಾಗಿ 1911ರಲ್ಲಿ ಕನ್ನಂಬಾಡಿ ಶಿಲಾನ್ಯಾಸಕ್ಕೆ ಅನುಮತಿ ಸಿಕ್ಕಿತು.
  • ಈ ವಸಾಹತು ಹಿತಾಸಕ್ತಿಗೆ ಬಲಿಯಾಗಿ ಮೈಸೂರು ಸಂಸ್ಥಾನ ಹಿಂದುಳಿಯುವಂತಾಯಿತು.
  • 1924ರಲ್ಲಿ ಕರ್ನಾಟಕದಲ್ಲಿದ್ದ 3.15 ಲಕ್ಷ ಎಕರೆ ನೀರಾವರಿ ಪ್ರದೇಶ 1972ರ ವೇಳೆಗೆ 6.6 ಲಕ್ಷ ಎಕರೆಗೆ ಮಾತ್ರ ವಿಸ್ತಾರಗೊಂಡಿತು. ಆದರೆ ಕಾವೇರಿ ಕಣಿವೆ ಪ್ರದೇಶದಲ್ಲಿ ಶೇ. 31.9ರಷ್ಟು ಮಾತ್ರ ನೀರೊದಗಿಸುತ್ತಿದ್ದ ತಮಿಳುನಾಡು ರಾಜ್ಯ 1924ರಲ್ಲಿ 14.5 ಲಕ್ಷ ಎಕರೆ ಇದ್ದ ತನ್ನ ನೀರಾವರಿ ಪ್ರದೇಶವನ್ನು 1972ರ ವೇಳೆಗೆ 22 ಲಕ್ಷ ಎಕರೆಗೆ ಹೆಚ್ಚಿಸಿಕೊಂಡಿತು.
  • 1972ರಲ್ಲಿ ತಮಿಳುನಾಡು ರಾಜ್ಯ 489 ಟಿಎಂಸಿ ಅಡಿ ನೀರು ಬಳಸಿಕೊಳ್ಳುತ್ತಿದ್ದರೆ, ಕರ್ನಾಟಕ ಕೇವಲ 117 ಟಿಎಂಸಿ ಬಳಸಿಕೊಳ್ಳುತ್ತಿತ್ತು.
  • ಕಾವೇರಿ ಕಣಿವೆಗೆ ಶೇ. 50ಕ್ಕೂ ಹೆಚ್ಚು ನೀರನ್ನು ಸಲ್ಲಿಸುವ ಕರ್ನಾಟಕ 1972ರಲ್ಲಿ ಕೇವಲ ಶೇ. 20ರಷ್ಟು ನೀರನ್ನು ಮಾತ್ರ ಪಡೆದಿತ್ತು.
  • ಸ್ವಾತಂತ್ರ್ಯಾನಂತರ ಕಾವೇರಿ ವಿವಾದ ಹೊಸ ತಿರುವುಗಳನ್ನು ಪಡೆಯಲಾರಂಭಿಸಿತು. (ಮುಖ್ಯವಾಗಿ ಭಾಷಾವಾರು ವಿಂಗಡಣೆಯ ನಂತರ ಅಂದರೆ, ಕೊಳ್ಳೆಗಾಲ ಹಾಗೂ ಕೊಡಗು ರಾಜ್ಯ ಕರ್ನಾಟಕದಲ್ಲಿ ಸೇರ್ಪಡೆಗೊಂಡಾದ ಮೇಲೆ)
  • 1958ರಲ್ಲಿ ಕರ್ನಾಟಕ ಹೇಮಾವತಿ, ಕಬಿನಿ, ಸುವರ್ಣಾವತಿ ಹಾಗೂ ಹಾರಂಗಿ ಯೋಜನೆಗೆ ಮುಂದಾದಾಗ ತಮಿಳುನಾಡು ಆಕ್ಷೇಪ ಎತ್ತಿತು.
  • ಇದಕ್ಕೂ ಮೊದಲು ತಮಿಳುನಾಡು ಸರಕಾರ ಮೆಟ್ಟೂರು ಹಾಗೂ ಹೊಸ ಕತ್ತಲಾಯಿ ಮೇಲು ಹಂತದ ಕಾಲುವೆ, ಪುಳ್ಳಂಬಾಡಿ ಯೋಜನೆಗೆ ಮುಂದಾದಾಗ ಕರ್ನಾಟಕ ಆಕ್ಷೇಪ ಎತ್ತಿತು.
  • ಮೈಸೂರು ರಾಜ್ಯದ ಗಮನಕ್ಕೆ ತಂದು ಹೊಸ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ 1924ರ ಒಪ್ಪಂದವನ್ನು ತಮಿಳುನಾಡು ಸ್ಪಷ್ಟವಾಗಿ ಉಲ್ಲಂಘಿಸಿತ್ತು.
  • ಕರ್ನಾಟಕದ ನೀರಾವರಿ ಯೋಜನೆ ಸ್ಥಗಿತಕ್ಕೆ ಮನವಿ ಮಾಡಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು 1971ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಸಲ್ಲಿಸಿದವು.
  • 1972ರಲ್ಲಿ ನಡೆದ ಅಂತಾರಾಜ್ಯ ಮುಖ್ಯಮಂತ್ರಿಗಳ ಸಭೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಕಾವೇರಿ ಸತ್ಯಶೋಧನಾ ಸಮಿತಿ ರಚಿಸಿತು.
  • ಅಂದಿನಿಂದ 1990ರವರೆಗೆ ಎರಡೂ ರಾಜ್ಯಗಳ ನಡುವೆ ಮಾತುಕತೆ. ಯಾವುದೂ ಫಲಪ್ರದವಾಗಲಿಲ್ಲ. 1990 ವಿವಾದವನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಒಪ್ಪಿಸಿತು. ವಿವಾಜವನ್ನು ಬಗೆಹರಿಸಲು ನ್ಯಾಯ ಪಂಚಾಯ್ತಿ ರಚಿಸುವಂತೆ ಅದೇ ಸುಪ್ರೀಂ ಕೋರ್ಟ್‌ ಭಾರತ ಸರಕಾರಕ್ಕೆ ಆದೇಶ ನೀಡಿತು.
  • 1990ರ ಜೂನ್‌ 2ರಂದು ನ್ಯಾಯಮೂರ್ತಿ ಚಿತ್ತತೋಷ್‌ ಮುಖರ್ಜಿ ನೇತೃತ್ವದಲ್ಲಿ ಕೇಂದ್ರ ಸರಕಾರ ಕಾವೇರಿ ಜಲ ವಿವಾದ ನ್ಯಾಯ ಪಂಚಾಯ್ತಿಯನ್ನು ರಚಿಸಿತು.
  • 1991ರ ಜೂನ್‌ 25ರಂದು ನ್ಯಾಯ ಮಂಡಳಿ ಮಧ್ಯಂತರ ಆದೇಶ ಪ್ರಕಟ. ಇದರ ಪ್ರಕಾರ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 205 ಟಿಎಂಸಿ ನೀರು ಬಿಡಬೇಕು ಹಾಗೂ ಅದರ ಹಾಲಿ 11.2 ಲಕ್ಷ ಎಕರೆ ನೀರಾವರಿ ಸೌಲಭ್ಯವನ್ನು ಹೆಚ್ಚಿಸಬಾರದು.
  • 1991ರ ಮಧ್ಯಂತರ ಆದೇಶಕ್ಕೆ ಕರ್ನಾಟಕದ ವಿರೋಧ. ರಾಜ್ಯದಲ್ಲಿ ಹಿಂಸಾಚಾರ... ಆಗಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಸರ್ಕಾರದಿಂದ ಸುಗ್ರೀವಾಜ್ಞೆ... ಸುಪ್ರೀಂಕೋರ್ಟ್‌ನಿಂದ ಸುಗ್ರೀವಾಜ್ಞೆ ರದ್ದು...
  • 1993ರ ಜುಲೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರಿಂದ ಮಧ್ಯಂತರ ಆದೇಶ ಜಾರಿಗೆ ಒತ್ತಾಯ.
  • 1996 ಮತ್ತು 1997ರ ಅವಧಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಸಭೆ ಫಲಕಾರಿಯಾಗಲಿಲ್ಲ.
  • 1998ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ.
  • 2002ರ ಜನವರಿ ಉಭಯ ರಾಜ್ಯಗಳಿಂದ ನ್ಯಾಯಾಧಿಕರಣಮ ಮುಂದೆ ವಾದ ಮಂಡನೆ.
  • 2003ರ ಏಪ್ರಿಲ್‌ನಲ್ಲಿ ಕಾವೇರಿ ಕುಟುಂಬದ ರಚನೆ. ಉಭಯ ರೈತರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳುವ ಹೊಸ ಪ್ರಯತ್ನಕ್ಕೆ ಮುಂದಾದರು.
  • 2005ರ ಆಗಸ್ಟ್‌ನಲ್ಲಿ ಅಂತಾರಾಜ್ಯ ಜಲವಿವಾದ ಕಾಯಿದೆ ಕಾರಣದಿಂದ ನ್ಯಾಯಮಂಡಳಿ ವಿಚಾರಣೆಯನ್ನು ಮುಂದಕ್ಕೆ ಹಾಕಿತು.
  • 2006ರ ಏಪ್ರಿಲ್‌ ಉಭಯ ರಾಜ್ಯಗಳಿಂದ ಕೊನೆ ಹಂತದ ವಾದ ಮಂಡನೆ.
  • 2006ರ ಆಗಸ್ಟ್‌ನಲ್ಲಿ ನ್ಯಾಯಾಧಿಕರಣದ ವಿಚಾರಣೆ ಮತ್ತೆ ಮುಂದಕ್ಕೆ.
  • 2007 ಫೆಬ್ರವರಿ 5 ನ್ಯಾಯಾಧಿಕರಣದ ಅಂತಿಮ ತೀರ್ಮಾನ
(ಸಂಗ್ರಹ : ಸಿ.ಕೆ. ಮಹೇಂದ್ರ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X