ಮಕ್ಕಳ ಹಿತಕ್ಕಾಗಿ ದೇವೇಗೌಡ ವಾಮಚಾರಕ್ಕೆ ಶರಣು!
ಬೆಂಗಳೂರು : ರಾಜ್ಯದಲ್ಲಿನ ದೋಸ್ತಿ ಸರ್ಕಾರಕ್ಕೆ ಶನಿವಾರ ಒಂದು ವರ್ಷದ ಸಂಭ್ರಮ. ಇತ್ತ ಮಗನ ಹಿತಕ್ಕಾಗಿ, ಮುಖ್ಯಮಂತ್ರಿ ಪದವಿ ಗಟ್ಟಿಯಾಗಿ ಉಳಿಯಲಿ ಎಂದು ದೇವೇಗೌಡರ ಕುಟುಂಬ, ವಿಶೇಷ ಪೂಜೆ ಪುನಸ್ಕಾರಗಳ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇಂತಹ ಮಾಹಿತಿಗಳುಳ್ಳ ಕರಪತ್ರಗಳು ವಿಧಾನಸೌಧದ ಮೊಗಸಾಲೆಯಲ್ಲಿ ಕಂಡು ಬಂದಿವೆ. ಫೆ.17ರಿಂದ ಮಾ.20ರೊಳಗೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಜ್ಯೋತಿಷಿಗಳು ಹೇಳಿರುವುದು ಗೌಡರ ಚಿಂತೆಗೆ ಕಾರಣ. ಹೀಗಾಗಿ ಮಕ್ಕಳ ಹಿತಕ್ಕಾಗಿ ವಾಮಾಚಾರ ಮಾರ್ಗವನ್ನು ದೇವೇಗೌಡರು ಆರಿಸಿಕೊಂಡಿದ್ದಾರೆ.
ಕರಪತ್ರದ ವಿವರ :
ತಮ್ಮ ರಾಜಕೀಯ ಎದುರಾಳಿಗಳ ಸರ್ವನಾಶ ಮತ್ತು ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ದೇವೇಗೌಡರು, ಫೆ.1ರಂದು ಮಧುರೈನ ಶಕ್ತಿ ದೇವಾಲಯಕ್ಕೆ ತೆರಳಿದ್ದಾರೆ. ಅಲ್ಲಿ 108ಮಾಂತ್ರಿಕರು ಮತ್ತು ವಶೀಕರಣ ಪಂಡಿತರೊಂದಿಗೆ ವಿಶೇಷ ಪೂಜೆ-ಪುನಸ್ಕಾರ ನಡೆಸಲಿದ್ದಾರೆ. ಹುಣ್ಣಿಮೆಯ ದಿನವಾದ ಶನಿವಾರ ದುಷ್ಟಶಕ್ತಿಯ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ
ಬಿಜೆಪಿಯ 54ಶಾಸಕರು, ಕಾಂಗ್ರೆಸ್ನ 8ಮುಖಂಡರು, ಜೆಡಿಎಸ್ನ 36ಶಾಸಕರ ಹೆಸರು ಮತ್ತು ಭಾವಚಿತ್ರವನ್ನು ಜೊತೆಯಲ್ಲಿ ಕೊಂಡೊಯ್ಯಲಾಗಿದ್ದು, ತಮ್ಮ ಮಾತುಕೇಳುವಂತೆ ವಶೀಕರಣ ಮಾಡಿಕೊಳ್ಳುವ ಪೂಜೆಗೆ ಸಿದ್ಧತೆ ನಡೆಸಲಾಗಿದೆ. ಕತ್ತೆ, ಕುರಿ, ಕೋಳಿಗಳನ್ನು ಬಲಿಕೊಟ್ಟು, ವಾಮಾಚಾರದ ಮೂಲಕ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುವ ಯತ್ನ ನಡೆಸಲಾಗಿದೆ. ಈ ಪೂಜೆಯಿಂದ ರೇವಣ್ಣನಿಗೆ ಶುಕ್ರದೆಸೆ ಬರಲಿದೆ ಎನ್ನಲಾಗಿದೆ.
ದೇವೇಗೌಡ ಮತ್ತು ರೇವಣ್ಣ ಅವರುಗಳು ಮಧುರೈಗೆ ತೆರಳಿರುವುದನ್ನು ಜೆಡಿಎಸ್ ಮೂಲಗಳು ಖಚಿತಪಡಿಸಿವೆ.
(ಏಜನ್ಸೀಸ್)