ಫೆ. 5ರ ತೀರ್ಪಿನಿಂದ ತಾಯಿ ಕಾವೇರಿ ಮತ್ತೆ ಕಾವೇರುವಳೇ?
ಬೆಂಗಳೂರು : ನೆರೆರಾಜ್ಯಗಳ ಜೊತೆ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ, ಮತ್ತೆ ಕಾವೇರುವಳೇ?- ಈ ಪ್ರಶ್ನೆಗೆ ಸೋಮವಾರ ಉತ್ತರ ಲಭ್ಯ! ಅಂದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬೀಳಲಿದೆ.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ನ್ಯಾಯಾಧಿಕಾರಣ, ತನ್ನ ಅಂತಿಮ ತೀರ್ಪನ್ನು ನೀಡಲಿದೆ. ಆ ತೀರ್ಪಿನತ್ತ ಎಲ್ಲರ ಕಣ್ಣು. ಮತ್ತೊಂದು ಕಡೆ, ಅಹಿತಕರ ಘಟನೆಗಳ ತಪ್ಪಿಸಲು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ತೀರ್ಪು ಯಾರ ಪರವೋ ಗೊತ್ತಿಲ್ಲ. ಆದರೆ ಈಗಾಗಲೇ ಕನ್ನಡ ಪರ ಸಂಘಟನೆಗಳು ಎಚ್ಚರಿಕೆಗಳನ್ನು ರವಾನಿಸಿವೆ. 1992ರಲ್ಲಿ ತಮಿಳುನಾಡಿಗೆ 205ಟಿಎಂಸಿ ನೀರು ಬಿಡಬೇಕು ಎಂಬ ನಿರ್ದೇಶನ, ವ್ಯಾಪಕ ಹಿಂಸೆಗೆ ಕಾರಣವಾಗಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕ ಅಂದು ಬೆಂಕಿಯ ಚೆಂಡಾಗಿತ್ತು.
ಹೀಗಾಗಿಯೇ ಈಗ ಅತಿ ಸೂಕ್ಷ್ಮ ಪ್ರದೇಶಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಮತ್ತಿತರ ಭಾಗಗಳಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ. ಆಂಧ್ರ ಮತ್ತು ಕೇರಳದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.
ತೀರ್ಪಿನ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ, ಒಮ್ಮತ ಮೂಡಿದೆ.
ಗಣ್ಯರ
ಪ್ರತಿಕ್ರಿಯೆ
:
- ಯಾವುದೇ ಪರಿಸ್ಥಿತಿ ಎದುರಿಸಲು, ರಾಜ್ಯದ ಹಿತಕಾಯಲು ಬದ್ಧರಾಗಿದ್ದೇವೆ. ಮಾಧ್ಯಮಗಳು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸಬಾರದು - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.
- ರಾಜ್ಯಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ - ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ.
- ತೀರ್ಪು ರಾಜ್ಯದ ಪರವಾಗಿ ಬರಲಿದೆ ಎಂಬ ನಿರೀಕ್ಷೆ ನಮ್ಮದು. ರಾಜ್ಯದ ಜನರು ಸಂಯಮದಿಂದ ವರ್ತಿಸಬೇಕು - ಪುಟ್ಟಣ್ಣಯ್ಯ, ರೈತ ಸಂಘದ ಮುಖಂಡ.
- ತೀರ್ಪನ್ನು ಕಾದು ನೋಡೋಣ...- ಅಂಬರೀಷ್, ಸಂಸದ.
- ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ - ಎನ್.ಧರ್ಮಸಿಂಗ್.