ಮತದಾರರ ಪಟ್ಟಿಯಲ್ಲಿ ಎಸ್.ಎಂ.ಕೃಷ್ಣ ಹೆಸರು ನಾಪತ್ತೆ!
ಮುಂಬಯಿ : ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕಣ್ಮರೆಯಾಗಿದೆ!
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ, ನಗರದ ಮುನಿಸಿಫಲ್ ಚುನಾವಣೆಯಲ್ಲಿ ಗುರುವಾರ ಮತದಾನ ಮಾಡಲು ರಾಜ್ಯಪಾಲರಿಗೆ ಸಾಧ್ಯವಾಗಲಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.
ರಾಜ್ಯಪಾಲರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಿಬೇಕಿತ್ತು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಅಚಾತುರ್ಯ ಸಂಭವಿಸಿದೆ. ರಾಜ್ಯದ ಮೊದಲ ಪ್ರಜೆಯ ಹೆಸರನ್ನೇ ಮರೆತರೆ ಹೇಗೆ ಎಂದು ರಾಜಭವನದ ಮೂಲಗಳು ದೂರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಕಮೀಷನರ್ ನಂದ್ಲಾಲ್, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಪ್ರತಿಯಾಬ್ಬ ಪೌರರ ಕರ್ತವ್ಯ. ರಾಜ್ಯಪಾಲರು ತಮ್ಮ ಹೆಸರನ್ನು ಸೇರಿಸಿದ್ದಾರೋ, ಇಲ್ಲವೋ ನಮಗೆ ತಿಳಿದಿಲ್ಲ ಎಂದಿದ್ದಾರೆ.
ಡಿ.2004ರಲ್ಲಿ ರಾಜ್ಯಪಾಲರಾಗಿ ಅಧಿಕಾರವಹಿಸಿಕೊಂಡ ಎಸ್.ಎಂ.ಕೃಷ್ಣ, ಹಿಂದೆ ನಡೆದ ಚುನಾವಣೆಯಲ್ಲೂ ಮತ ಚಲಾಯಿಸಿರಲಿಲ್ಲ.
ಮುಂಬಯಿ ಮುನಿಸಿಫಲ್ ಕಾರ್ಫೋರೇಷನ್ನ 227ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಗುರುವಾರ ಬೆಳಗ್ಗೆಯಿಂದಲೇ ಮತದಾನ ಆರಂಭಗೊಂಡಿದೆ. 85ಲಕ್ಷ ಮತದಾರರು, ಇಂದು 3000 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.
(ಏಜನ್ಸೀಸ್)