ಮುಸ್ಲಿಂರಿಗೆ ಶಿಕ್ಷಣ ಮೀಸಲಾತಿ ಬೇಡ : ಫಾತ್ಮಿ ಆಯೋಗ
ನವದೆಹಲಿ : ಮುಸ್ಲಿಮರಿಗೆ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವುದು ಬೇಡ ಎಂದು ಫಾತ್ಮಿ ಅಯೋಗ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ತನ್ನ ವರದಿಯನ್ನು ಆಯೋಗ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಬುಧವಾರ(ಜ.31) ಸಲ್ಲಿಸಲಿದೆ. ಫಾತ್ಮಿ ಆಯೋಗದ ವರದಿಗೆ ಮುಸ್ಲಿಂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ವಾಸ್ತವ ಸ್ಥಿತಿಯನ್ನು ಆಯೋಗ ಅಧ್ಯಯನ ನಡೆಸಿಲ್ಲ ಎಂಬ ವಾದಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಸಾಚಾರ್ ಸಮಿತಿ ನೀಡಿದ ವರದಿ ಹಾಗೂ ವ್ಯಾಪಕ ಸಮೀಕ್ಷೆ ನಡೆಸಿದ ನಂತರ ಈ ನಿರ್ಣಯಕ್ಕೆ ಬರಲಾಗಿದೆ. ಮುಸ್ಲಿಮರಿಗೆ ಮೀಸಲಾತಿ ನೀಡುವ ಬದಲು ಅಗತ್ಯ ಸೌಲಭ್ಯವನ್ನು ಒದಗಿಸಲು ಕೇಳಲಾಗುವುದು ಎಂದು ಫಾತ್ಮಿ ಅಯೋಗ ಹೇಳಿದೆ.
ಈ ವರದಿಯಲ್ಲಿ ಶಾಲೆ ನಿರ್ಮಾಣ, ವೃತ್ತಿ ತರಬೇತಿ, ಅಲ್ಪ ಸಂಖ್ಯಾತರಿಗಾಗಿ ಸೀಟು ಹೆಚ್ಚಳ, ಹೆಣ್ಣುಮಕ್ಕಳಿಗೆ ಪ್ರತ್ಯೇಕ ಸೌಲಭ್ಯಗಳು ಮುಂತಾದ ಬೇಡಿಕೆಗಳನ್ನು ಕೇಳಲಾಗಿದೆ.
ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ವರದಿ ನೀಡಲು, ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅಯೋಗವನ್ನು ರಚಿಸಿದ್ದರು. ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಅಲಿ ಅಶ್ರಫ್ ಫಾತ್ಮಿ , ಈ ಅಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
(ಯುಎನ್ಐ)