ಹಿಂದೂ ಕುಟುಂಬಗಳಲ್ಲೂ ಮೊಹರಂ ಹಬ್ಬದ ಸಡಗರ
ಬೆಂಗಳೂರು : ಈ ನಾಡಿನಲ್ಲಿ ಕೆಲವೊಮ್ಮೆ ಜಾತಿ-ಧರ್ಮಗಳ ಹೆಸರಲ್ಲಿ ರಕ್ತದೋಕುಳಿ ನಡೆಯುತ್ತದೆ. ಇದೇ ನಾಡಲ್ಲಿ ಮೊಹರಂ ಸಂದರ್ಭದಲ್ಲಿ ಕೋಮು ಸಾಮರಸ್ಯ ಮೂಡುತ್ತದೆ!
ಹೌದು, ಮಂಗಳವಾರ ಮೊಹರಂ ಸಂಭ್ರಮ ಕಂಡು ಬಂದಿದ್ದು, ಹಿಂದೂ-ಮುಸ್ಲಿಂರು ಜಂಟಿಯಾಗಿ ಹಬ್ಬದ ಸಡಗರವನ್ನು ಹಂಚಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ , ವಿಶೇಷವಾಗಿ ಹಳ್ಳಿಗಳಲ್ಲಿ ಮೊಹರಂ ಸಂತೋಷ ಮೇಳೈಸಿದೆ.
ಚಿಕ್ಕಮಗಳೂರು ಜಿಲ್ಲೆಯ ಸದಾನಂದ ಸ್ವಾಮಿ ಕುಟುಂಬ, ಕಳೆದ 75ವರ್ಷಗಳಿಂದ ಮೊಹರಂ ಆಚರಿಸುತ್ತಿದೆ. ಸದಾನಂದಸ್ವಾಮಿ ತಂದೆ ಎಚ್. ಆಂಜನೇಯ ಹಾಕಿಕೊಟ್ಟ ಪರಿಪಾಠವನ್ನು ಅವರ ಕುಟುಂಬ ಮುಂದುವರೆಸಿದೆ. ಮೊಹರಂ ಹಬ್ಬವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸುವ ಸದಾನಂದಸ್ವಾಮಿ ಕುಟುಂಬ, ಯಲ್ಲಮ್ಮ ಮತ್ತು ವೆಂಕಟೇಶ್ವರ ಸ್ವಾಮಿ ಭಕ್ತರು ಸಹಾ ಹೌದು. ಇಂತಹ ಕುಟುಂಬಗಳು ನಾಡಿನಲ್ಲಿ ಸಾಕಷ್ಟಿವೆ.
ಇನ್ನೊಂದು ವರದಿ : ಕೊಪ್ಪಳ ಬಳಿಯ ಕುದುರಿಮೋತಿಯಲ್ಲಿ ಮಂಗಳವಾರ ಹಬ್ಬದ ಸಡಗರ. ಹಿಂದೂಧರ್ಮಕ್ಕೆ ಸೇರಿದ ಹಗಲುವೇಷಗಾರರು, ಮೊಹರಂ ಸಡಗರದಲ್ಲಿ ಬೆರೆತು ಹೋಗಿದ್ದಾರೆ. ಜನ ಜಾತ್ರೆಯೇ ಇಲ್ಲಿ ಸೇರಿದೆ.
(ಏಜನ್ಸೀಸ್)