ಗಾಂಧೀಜಿ ಒಪ್ಪಿದ ಹಿಂದೂ ಧರ್ಮ ನಮ್ಮದು -ಆಡ್ವಾಣಿ
ಬೆಂಗಳೂರು : ಕ್ರಿಶ್ಚಿಯನ್ನರು ಮತ್ತು ಮುಸ್ಲಿಂರು ತಮ್ಮ ಧರ್ಮದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರೆ, ಎಲ್ಲರೂ ಸುಮ್ಮನಿರುತ್ತಾರೆ. ಆದರೆ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರೆ ಕೋಮುವಾದಿಗಳೆನ್ನುತ್ತಾರೆ. ಯಾಕೆ ಹೀಗೆ ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಪ್ರಶ್ನಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ, ಸಾಮೂಹಿಕ ಸೌಂದರ್ಯ ಲಹರಿ ಸ್ತೋತ್ರ ಪಠಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿಂದೂ ಧರ್ಮದ ಬಗೆಗಿನ ಅಭಿಮಾನ ಕೋಮುವಾದವಲ್ಲ . ಧರ್ಮದ ಬಗ್ಗೆ ಅಭಿಮಾನ ತಪ್ಪೂ ಅಲ್ಲ. ಗಾಂಧಿಯಂತಹ ಮಹಾತ್ಮರೇ, ಧರ್ಮದ ಬಗ್ಗೆ ಅಭಿಮಾನ ಹೊಂದಿದ್ದರು. ತಮ್ಮ ಭಾಷಣಕ್ಕೆ ಮೊದಲು ಗಾಂಧೀಜಿ ದೇವರ ಭಜನೆ ಮಾಡುತ್ತಿದ್ದರು. ನಾನು ಸಹ ಒಬ್ಬ ಹಿಂದೂ ಎಂದು ಗತ್ತಿನಿಂದ ಹೇಳುತ್ತಿದ್ದರು. ಧರ್ಮ ಇಲ್ಲದ ರಾಜಕಾರಣವನ್ನು ಗಾಂಧಿ, ಕಸಕ್ಕೆ ಹೋಲಿಸಿದ್ದರು ಎಂದು ಆಡ್ವಾಣಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಜನರು ಏಕಕಾಲದಲ್ಲಿ ಶಂಕರ ಭಗವತ್ಪಾದ ವಿರಚಿತ ಸೌಂಧರ್ಯ ಲಹರಿಯ ನೂರು ಸ್ತೋತ್ರಗಳನ್ನು ಪಠಿಸಿದರು.
(ದಟ್ಸ್ ಕನ್ನಡ ವಾರ್ತೆ)