ಪುಟ್ಟರಾಜ ಗವಾಯಿಗಳಿಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ
ಭೋಪಾಲ್: ಗದಗಿನ ಗಾನಗಂಧರ್ವ ಪುಟ್ಟರಾಜ ಗವಾಯಿ ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಗೈದಿರುವ ಅವರು ಕವಿಯೂ ಹೌದು. ಗಾಯನದ ಜೊತೆಗೆ ವಿವಿಧ ವಾದ್ಯಗಳನ್ನು ನುಡಿಸುವುದರಲ್ಲಿಯೂ ಅವರು ಸಿದ್ಧಹಸ್ತರು. ಗದಗದಲ್ಲಿನ ಸಂಗೀತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆ ನೀಡುವುದರಲ್ಲಿ ಅವರು ನಿರತರಾಗಿದ್ದಾರೆ.
ಮಧ್ಯಪ್ರದೇಶ ಸರ್ಕಾರ 2006-07ನೇ ಸಾಲಿನ ಇತರ ಪ್ರಶಸ್ತಿಗಳನ್ನೂ ಪ್ರಕಟಿಸಿದೆ. ನೃತ್ಯವಿಭಾಗದ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಓಡಿಸ್ಸಿ ನೃತ್ಯಗಾತಿ ಸೋನಾಲಿ ಮಾನ್ಸಿಂಗ್ ಅವರ ಪಾಲಾಗಿದೆ. ಚಿತ್ರನಟ, ಸಂಸದ ಶತ್ರುಘ್ನ ಸಿನ್ಹಾ ಕಿಶೋರ್ಕುಮಾರ್ ಸಮ್ಮಾನ್ ಪ್ರಶಸ್ತಿಗೆ, ಹೃದಯನಾಥ್ ಮಂಗೇಶ್ವರ್ ರಾಷ್ಟ್ರೀಯ ಲತಾ ಮಂಗೇಷ್ಕರ್ ಪುರಸ್ಕಾರಕ್ಕೆ ಹಾಗೂ ಜಾನಪದ ಗಾರುಡಿಗ ಲಲ್ಲೂ ವಾಜಪೇಯಿ ತುಳಸಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಂದೋರ್, ಖಾಂಡ್ವಾ ಹಾಗೂ ಉಜ್ಜಯಿನಿಗಳಲ್ಲಿ ಪ್ರತ್ಯೇಕ ಪ್ರಶಸ್ತಿ ಸಮಾರಂಭಗಳು ನಡೆಯಲಿವೆ. ಪ್ರತಿ ಪ್ರಶಸ್ತಿಯೂ ಒಂದು ಲಕ್ಷ ರೂಪಾಯಿ ನಗದು, ಪ್ರಮಾಣ ಪತ್ರ ಹಾಗೂ ಸ್ಮರಣಿಗೆಗಳನ್ನು ಒಳಗೊಂಡಿದೆ.
(ಏಜನ್ಸೀಸ್)