ಪತ್ರಿಕಾರಂಗದ ‘ಗಾಂಧಿ’ ವೈ.ಕೆ. ರಾಜಗೋಪಾಲ್ ಇನ್ನಿಲ್ಲ
ಬೆಂಗಳೂರು : ಹಿರಿಯ ಪತ್ರಕರ್ತ ವೈ.ಕೆ.ರಾಜಗೋಪಾಲ್(87) ಅನಾರೋಗ್ಯದಿಂದ ಬುಧವಾರ ಕೊನೆ ಉಸಿರೆಳೆದರು. ಆ ಮೂಲಕ ಪತ್ರಿಕೋದ್ಯಮದ ಹಳೆಯ ಕೊಂಡಿ ಕಳಚಿಬಿದ್ದಿದೆ.
ಖಾದಿ ಜುಬ್ಬ ಮತ್ತು ಖಾದಿ ಪಂಚೆಯನ್ನು ಧರಿಸಿ, ಪತ್ರಿಕೋದ್ಯಮದ ಗಾಂಧಿಯಂತೆ ಬಾಳಿದವರು ರಾಜಗೋಪಾಲ್. ಅವರ ಪಾಲಿಗೆ ಪತ್ರಿಕೋದ್ಯಮ ವೃತ್ತಿಯಾಗಿರಲಿಲ್ಲ , ಬದುಕಾಗಿತ್ತು. ಅಕ್ಷರ ಲೋಕದಲ್ಲಿ ಕ್ರಿಯಾಶೀಲರಾಗಿ, ನಿಜವಾದ ಪತ್ರಕರ್ತರಾಗಿ ಗುರ್ತಿಸಿಕೊಂಡ ಹೆಗ್ಗಳಿಕೆ ಅವರದು. ಅವರ ಪಾಲಿಗೆ ಪತ್ರಿಕೆ ಮತ್ತು ಸುದ್ದಿಮನೆಯೇ ಹೆಂಡತಿ. ಹೀಗಾಗಿಯೇ ಏನೋ ಬ್ರಹ್ಮಚಾರಿಯಾಗಿಯೇ ಉಳಿದಿದ್ದರು.
ಸುದ್ದಿಗೋಷ್ಠಿಗಳಲ್ಲಿ ಈಗಿನ ಬಹುಮಂದಿ ಪತ್ರಕರ್ತರು ಉಡುಗೊರೆಗಳನ್ನು ಬಯಸುತ್ತಾರೆ. ಆದರೆ ರಾಜಗೋಪಾಲ್, ಸಮಗ್ರ ಸುದ್ದಿ ಮತ್ತು ಮಾಹಿತಿಗಳನ್ನು ಕೇಳುತ್ತಿದ್ದರು. ಸಂಗ್ರಹಿಸುತ್ತಿದ್ದರು. ಡೆಕನ್ ಹೆರಾಲ್ಡ್ನಲ್ಲಿ ಸುಮಾರು ವರ್ಷ ದುಡಿದ ಅವರು, ತಮ್ಮ ಕೊನೆ ದಿನಗಳನ್ನು ಸಜ್ಜನ್ ರಾವ್ ಸಮೀಪದ ವೃದ್ದಾಶ್ರಮದಲ್ಲಿ ಕಳೆದಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿದ್ದವು. ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದು, ರಾಜಗೋಪಾಲ್ ಪತ್ರಿಕೋದ್ಯಮದ ಮೌಲ್ಯಗಳು ಮತ್ತು ಬರವಣಿಗೆಯಾಂದಿಗೆ ಎಂದೂ ರಾಜಿಮಾಡಿಕೊಂಡಿರಲಿಲ್ಲ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಮಾತು ನೂರಕ್ಕೆ ನೂರು ಸತ್ಯ.
(ದಟ್ಸ್ ಕನ್ನಡ ವಾರ್ತೆ)