ಸದ್ದಾಂಗೆ ಗಲ್ಲು; ಶಿವಾಜಿನಗರದಲ್ಲಿ ಕಲ್ಲು, ಗುಂಡು, ಬೆಂಕಿ!
ಬೆಂಗಳೂರು : ಇರಾಕ್ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಗಲ್ಲು ಪ್ರಕರಣ ವಿರೋಧಿಸಿ, ಶಿವಾಜಿನಗರದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಟನೆ, ಹಿಂಸೆಗೆ ತಿರುಗಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್, ಸಿ.ಎಂ.ಇಬ್ರಾಹಿಂ ಮತ್ತಿತರ ಮುಖಂಡರ ನೇತೃತ್ವದಲ್ಲಿ ಪೀಪಲ್ ಫ್ರಂಟ್ ಸಂಘಟನೆ, ಪ್ರತಿಭಟನಾ ಕಾರ್ಯಕ್ರಮವನ್ನು ಶುಕ್ರವಾರ ಸಂಘಟಿಸಿತ್ತು. ಮಧ್ಯಾಹ್ನ ಪ್ರಾರ್ಥನೆ ಮುಗಿಸಿ, ಸಂಜೆ ವೇಳೆಗೆ ಸಾವಿರಾರು ಮುಸ್ಲಿಂರು ಭಾರತೀ ನಗರದ ಮೈದಾನದಲ್ಲಿ ಸಭೆ ಸೇರುತ್ತಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿಗಳ ಗುಂಪೊಂದು ಏಕಾಏಕಿ ಹಿಂಸೆಗಿಳಿಯಿತು.
ಗಲಭೆ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವದ ಬ್ಯಾನರ್ಗಳಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದವು. ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು, ಗಾಳಿಯಲ್ಲಿ ಗುಂಡು ಮತ್ತಿತರ ಕ್ರಮಗಳಿಂದ ಪರಿಸ್ಥಿತಿ ನಿಯಂತ್ರಿಸಿದರು. ಆದರೂ ನೂರಾರು ವಾಹನಗಳು, ನೂರಾರು ಅಂಗಡಿ ಮುಂಗಟ್ಟುಗಳು ಜಖಂಗೊಂಡಿವೆ.
ಈ ಭಾಗದಲ್ಲಿ ಶುಕ್ರವಾರ ಸಂಜೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)