ಮಾನಸ ಸರೋವರ ಮಾರ್ಗ ತೆರವು: ಅಡ್ವಾಣಿ ಭರವಸೆ
ಮೈಸೂರು : ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರ ಕೈಲಾಸ ಮಾನಸ ಸರೋವರಕ್ಕೆ ತೆರಳಲು ಟಿಬೇಟ್ನ ಡೆಮ್ ಚಾಕ್ ಮೂಲಕ ಹೋಗಲು ಅವಕಾಶ ಕಲ್ಪಿಸುವ ಭರವಸೆಯನ್ನು ಬಿಜೆಪಿಯ ನಾಯಕ ಎಲ್ .ಕೆ. ಅಡ್ವಾಣಿ ನೀಡಿದರು.
ನಂಜನಗೂಡಿನ ಬಳಿಯಿರುವ ಸುತ್ತೂರಿನಲ್ಲಿ ನಡೆದಿರುವ ಜಾತ್ರೆಯಲ್ಲಿ ಪಾಲ್ಗೊಂಡ ಅಡ್ವಾಣಿಯವರು ಮಾತನಾಡುತ್ತಾ, ‘ಭಾರತೀಯರು ಈಗ ಕೈಲಾಸ ಮಾನಸ ಸರೋವರಕ್ಕೆ ನೇಪಾಳ ಮೂಲಕ ಸಾಗುತ್ತಾರೆ. ಈ ರಸ್ತೆ ತುಂಬಾ ಕಡಿದಾಗಿದ್ದು, ಅನೇಕ ಬಾರಿ ಭೂ ಕುಸಿತದಿಂದ ಜನರು ಸಾವನ್ನಪ್ಪಿದ್ದಾರೆ. ಅದರೆ ಲೇಹ್ ಮೂಲಕ ಸಾಗುವ ರಸ್ತೆಯಲ್ಲಿ ವಾಹನಗಳ ಮೂಲಕ ಅರಾಮವಾಗಿ ಸಾಗಬಹುದು. ಈ ರಸ್ತೆ ಮೂಲಕ ಸಾಗಲು ಅನುಮತಿ ನೀಡುವ ಬಗ್ಗೆ ಚೀನಾ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದೇನೆ’ ಎಂದು ಹೇಳಿದರು.
‘ಮಹಾಭಾರತ ಕಾಲದಲ್ಲಿ ಧರ್ಮರಾಯನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ ಸ್ಥಳ ಎನ್ನಲಾದ ಈಶ್ವರನ ದೇವಾಲಯವನ್ನು ಪಾಕಿಸ್ತಾನದಲ್ಲಿ ಕಂಡಿದ್ದೇನೆ. ಶಿಥಿಲಗೊಂಡಿದ್ದ ಅ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮನವಿ ಮಾಡಿದ್ದೆ. ಪಾಕಿಸ್ತಾನ ಸರ್ಕಾರ ಈ ಸಂಬಂಧ ನಿಯೋಗವನ್ನು ಭಾರತಕ್ಕೆ ರವಾನಿಸಿತ್ತು. ದೇವಾಲಯ ನಿರ್ಮಾಣದ ಬಗ್ಗೆ ತಿಳಿಯಲಿ ಎಂದು ನಿಯೋಗವನ್ನು ತಿರುಪತಿ, ವೈಷ್ಣೋದೇವಿ ಮುಂತಾದ ದೇವಸ್ಥಾನಗಳನ್ನು ವೀಕ್ಷಿಸಲು ಕಳಿಸಲಾಯಿತು’ ಎಂದರು.
‘ಒಂದೇ ವೇದಿಕೆಯಲ್ಲಿ ಒಟ್ಟಿಗೆ ಬಾಲಗಂಗಾಧರನಾಥ ಸ್ವಾಮೀಜಿ, ರವಿಶಂಕರ್ ಗುರೂಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ದ ಗಂಗಾ ಶಿವಕುಮಾರ ಸ್ವಾಮೀಜಿ ಅವರನ್ನು ಕಂಡಿದ್ದು ನನ್ನ ಸುಕೃತ ’ಎಂದು ಅಡ್ವಾಣಿ ಹೇಳಿದರು.
ಜಾತ್ರೆಯಲ್ಲಿ ಉಪ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಂಸದ ಅನಂತ್ ಕುಮಾರ್, ಸಚಿವ ಡಿ.ಟಿ. ಜಯ ಕುಮಾರ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)