ಜ.26 : ವರೂರಿನ ಪಾರ್ಶ್ವನಾಥನಿಗೆ ‘ಮಸ್ತು’ಅಭಿಷೇಕ!
ಹುಬ್ಬಳ್ಳಿ : ನಗರದ ಹೊರವಲಯದಲ್ಲಿ ತಲೆ ಎತ್ತಿರುವ ನವಗ್ರಹ ತೀರ್ಥದ ಅಭಿವೃದ್ಧಿಗೆ, ಮುಂದಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಎರಡು ಕೋಟಿ ರೂ. ತೆಗೆದಿರಿಸಲಿದೆ ಎಂದು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಗೆ 16ಕಿ.ಮೀ.ದೂರದಲ್ಲಿರುವ ವರೂರಿನಲ್ಲಿನ ನವಗ್ರಹ ತೀರ್ಥದ ಲೋಕಾರ್ಪಣೆ ಮತ್ತು ಪಾರ್ಶ್ವನಾಥನ ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಶ್ರವಣ ಬೆಳಗೊಳದ ಮಾದರಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ ಅವರು, ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದರು.
ಮಜ್ಜನ ಪರ್ವ : ವಿಶ್ವದಲ್ಲೇ ಅತಿ ಎತ್ತರದ ಪಾರ್ಶ್ವನಾಥ (42ಅಡಿಯ ಪೀಠ ಸೇರಿ 105ಅಡಿ )ನ ಮೊದಲ ಮಹಾಮಜ್ಜನಕ್ಕೆ ವರೂರು ಸಜ್ಜಾಗಿದೆ. ಜ.26ರಂದು ಮಹಾಮಜ್ಜನ ನೆರವೇರಲಿದೆ.
ವಿಶ್ವದಲ್ಲಿ ಅತಿ ದೊಡ್ಡದು ಎನ್ನಲಾದ ನವಗ್ರಹ ತೀರ್ಥ, ವರೂರಿನ ಬಳಿ ತಲೆ ಎತ್ತಿದೆ. ಇಲ್ಲಿ ಪುಷ್ಪದಂತ, ಮಹಾವೀರ, ವಾಸುಪೂಜ್ಯ, ಮುನಿಸುವ್ರತನಾಥ, ಪದ್ಮಪ್ರಭ, ನೇಮಿನಾಥ, ಚಂದ್ರಪ್ರಭ, ಮಲ್ಲಿನಾಥ, ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳನ್ನು ಪ್ರತಿಸ್ಥಾಪಿಸಲಾಗಿದೆ. 45ಎಕರೆ ವ್ಯಾಪ್ತಿಯಲ್ಲಿ ಸುಮಾರು 80ಕೋಟಿ ವೆಚ್ಚದಲ್ಲಿ ಇಲ್ಲಿ ನವಗ್ರಹ ತೀರ್ಥವನ್ನು ನಿರ್ಮಾಣ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)