ದೂರಶಿಕ್ಷಣದ ಮೂಲಕ ಸಂಸ್ಕೃತ ಕಲಿಕೆ ಇನ್ನು ಸುಲಭ
ಬೆಂಗಳೂರು : ದೂರಶಿಕ್ಷಣ ವ್ಯವಸ್ಥೆಯ ಮೂಲಕ ಸಂಸ್ಕೃತ ಕಲಿಕೆ ಕಾರ್ಯಕ್ರಮವನ್ನು ಹಾಗೂ ಅದಕ್ಕೆಪೂರಕವಾಗಿ ಸಮುದಾಯ ರೇಡಿಯೋ ವಾಹಿನಿಯನ್ನು ಪ್ರಾರಂಭಿಸುವುದಾಗಿ ಬೆಂಗಳೂರು ಮೂಲದ ಶ್ರೀ ಸುರಭಾರತಿ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹೇಳಿದೆ.
‘ಸಂಸ್ಕೃತ ಅಧ್ಯಯನಕ್ಕೆ ಅನುಕೂಲವಾಗುವಂತೆ ರಾಜ್ಯದಾದ್ಯಂತ ಸಂಸ್ಕೃತ ಕಲಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಎಲ್ಲಾ ವಯೋಮಾನದ ಜನರು ಇದರ ಪ್ರಯೋಜನ ಪಡೆಯಬಹುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್ ಶ್ರೀನಿವಾಸ್ ಹೇಳಿದರು.
ಸೋಮವಾರ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಸುರಭಾರತಿ ಪ್ರತಿಷ್ಠಾನ ಮೂಲಕ ಶೃಂಗೇರಿ ಮಠದ ವಿದ್ವಾನ್ ಎಂ.ಎ. ನಾಗರಾಜ ಭಟ್ ಅವರಿಗೆ ‘ಶಾಸ್ತ್ರ ರತ್ನಾಕರ’ ಹಾಗೂ ಖ್ಯಾತ ಪಿಟೀಲು ವಾದಕ ಡಾ.ಎಲ್. ಸುಬ್ರಮಣ್ಯಂ ಅವರಿಗೆ ‘ಸಂಗೀತ ರತ್ನಾಕರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವೇದಶಾಸ್ತ್ರ ಅಧ್ಯಯನಕ್ಕೆ ಯುವಜನತೆ ತೋರುತ್ತಿರುವ ನಿರಾಸಕ್ತಿಯ ಬಗ್ಗೆ ಎಂ.ಎ. ನಾಗರಾಜಭಟ್ ಕಳವಳ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಶಂಕರ ಮಠದ ಅಡಳಿತ ಅಧಿಕಾರಿ ಇ.ಅರ್. ಗೌರಿಶಂಕರ್, ಯುಬಿ ಸಮೂಹ ಸಂಸ್ಥೆಯ ರವಿ ನೆಡುಂಗಡಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)